ರಾಜ್ಯ

ಶಿರೂರು ಶ್ರೀ ಅಸಹಜ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಮಹಿಳೆ ಪೊಲೀಸ್ ವಶಕ್ಕೆ

Srinivasamurthy VN
ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಪ್ರಕರಣ ಸಂಬಂಧ ಓರ್ವ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಬ್ರಹ್ಮಾವರ ಮೂಲದ ಮಹಿಳೆಯೊಬ್ಬರನ್ನು ಪೊಲೀಸರು ಪ್ರಸ್ತುತ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಬ್ರಹ್ಮಾವರ ಮೂಲದ ಈ ಮಹಿಳೆ ನಿತ್ಯ ಆಶ್ರಮಕ್ಕೆ ಆಗಮಿಸಿ ಸ್ವಾಮೀಜಿಗಳಿಗೆ ಫಲಾಹಾರ ತಯಾರಿಸಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಆಶ್ರಮದ ಮೂಲಗಳು ತಿಳಿಸಿರುವಂತೆ ರಮ್ಯಾ ಶೆಟ್ಟಿ ಎಂಬ ಮಹಿಳೆ ನಿತ್ಯ ಆಶ್ರಮಕ್ಕೆ ಆಗಮಿಸುತ್ತಿದ್ದರು. ಸ್ವಾಮಿಜಿಗಳಿಗೆ ಫಲಾಹಾ ನೀಡಿ ಬಳಿಕ ತೆರಳುತ್ತಿದ್ದರು.
ಪ್ರತೀ ಸೋಮವಾರ ಆಶ್ರಮಕ್ಕೆ ತಪ್ಪದೇ ಬರುತ್ತಿದ್ದ ಈ ಮಹಿಳೆ ಸೋಮವಾರ ರಾತ್ರಿ ಆಶ್ರಮದಲ್ಲೇ ತಂಗುತ್ತಿದ್ದರಂತೆ. ಅಲ್ಲದೆ ಸ್ವಾಮಿಜಿಗಳಿಗೆ ಸಂಬಂಧಿಸಿದ ಕೆಲ ಆರ್ಥಿಕ ವ್ಯವಹಾರಗಳಲ್ಲೂ ಈ ರಮ್ಯಾ ಶೆಟ್ಟಿ ಕೈಯಾಡಿಸುತ್ತಿದ್ದರಂತೆ. ಆಶ್ರಮದ ಒಂದು ಮೂಲದ ಪ್ರಕಾರ ಮಣಿಪಾಲದ ಇನಾಕ್ಸ್ ಥಿಯೇಟರ್ ಬಳಿ ಇರುವ ಶಿರೂರು ಮಟದ ಭೂಮಿಯಲ್ಲಿ ಬೃಹತ್ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಈ ಕಟ್ಟಡದಿಂದ ಬರುವ ಆದಾಯದ ಲೇವಾದೇವಿಯನ್ನೂ ಕೂಡ ಈ ರಮ್ಯಾ ಶೆಟ್ಟಿ ನೋಡಿಕೊಳ್ಳುತ್ತಿದ್ದರಂತೆ.
ಆಟೋ ಚಾಲಕನಿಂದ ಸ್ವಾಮಿಜಿಗಳಿಗೆ ಪರಿಚಯವಾಗಿದ್ದ ರಮ್ಯಾ ಶೆಟ್ಟಿ
ಇನ್ನು ಪ್ರಸ್ತುತ ಪ್ರಕರಣದಲ್ಲಿ ಬಲವಾಗಿ ಕೇಳಿಬರುತ್ತಿರುವ ಮಹಿಳೆ ರಮ್ಯಾಶೆಟ್ಟಿ ಓರ್ವ ಆಟೋ ಚಾಲಕನಿಂದ ಸ್ವಾಮೀಜಿಗೆ ಪರಿಚಯವಾಗಿದ್ದರಂತೆ. ಪರಿಚಯದ ಬಳಿಕ ಕ್ರಮೇಣ ನಿತ್ಯ ಅದೇ ಆಟೋ ಚಾಲಕ ತನ್ನ ಆಟೋದಲ್ಲೇ ಆ ಮಹಿಳೆಯನ್ನು ನಿತ್ಯ ಮಠಕ್ಕೆ ಕರೆತಂದು ಕರೆದೊಯ್ಯುತ್ತಿದ್ದ. ಇದನ್ನು ಗಮನಿಸಿದ್ದ ಸ್ಥಳೀಯರು ಮತ್ತು ಭಕ್ತರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಆಟೋ ಚಾಲಕನ ಬರುವಿಕೆ ಸ್ಥಗಿತವಾಗಿತ್ತು. ಆದರೆ ರಮ್ಯಾ ಶೆ್ಟ್ಟಿ ಮಾತ್ರ ನಿತ್ಯ ಆಶ್ರಮಕ್ಕೆ ಆಗಮಿಸಿ ಸ್ವಾಮಿಜಿಗೆ ಫಲಾಹಾರ ನೀಡಿ ತೆರಳುತ್ತಿದ್ದರು. ಪ್ರತೀ ಸೋಮವಾರ ತಪ್ಪದೇ ಬರುತ್ತಿದ್ದ ಮಹಿಳೆ ಸಂಜೆಯಾದರೂ ಮನೆಗೆ ವಾಪಸ್ ತೆರಳುತ್ತಿರಲಿಲ್ಲ. ಹಲವು ಬಾರಿ ತಡರಾತ್ರಿಯವರೆಗೂ ಆಶ್ರಮದಲ್ಲೇ ಇರುತ್ತಿದ್ದ ಮಹಿಳೆ ಬೆಳಗಿನ ಜಾವ ಆಶ್ರಮದಿಂದ ತೆರಳುತ್ತಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಒಟ್ಟಾರೆ ಶಿರೂರು ಶ್ರೀಗಳ ಅಸಹಜ ಸಾವು ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ದೊರೆಯುತ್ತಿದ್ದು, ನಿನ್ನೆ ಆಶ್ರಮದ ಅಡುಗೆ ಕೋಣೆಗೆ ಆಗಮಿಸಿದ್ದ ತನಿಖಾಧಿಕಾರಿಗಳು ಕೆಲ ಅಡುಗೆ ವಸ್ತುಗಳ ಮಾದರಿಯನ್ನು ವಶಕ್ಕೆ ಪಡೆದು ಕೆಲ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಾವಿಗೆ ಕಾರಣವಾಯಿತೇ ಅತಿಯಾದ ಕುಡಿತದ ಚಟ
ಇನ್ನು ಮತ್ತೊಂದು ಮೂಲಗಳ ಪ್ರಕಾರ ಶಿರೂರು ಶ್ರೀಗಳಿಗೆ ಕುಡಿತದ ಚಟ ಹೆಚ್ಚಾಗಿತ್ತು. ಈ ಬಗ್ಗೆ ಕೆಲ ತಿಂಗಳ ಹಿಂದೆಯೇ ವೈದ್ಯರು ಕುಡಿತ ಬಿಡುವಂಂತೆ ಶ್ರೀಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೇ ಶ್ರೀಗಳು ಕುಡಿತಕ್ಕೆ ದಾಸರಾಗಿದ್ದರು. ಹೀಗಾಗಿ ಅವರ ದೇಹದ ಅಂಗಾಂಗಗಳು ವಿಫಲವಾಗಿ ಅವರು ಸಾವನ್ನಪ್ಪಿರ ಬಹುದು ಎಂದು ಶಂಕಿಸಲಾಗಿದೆ.
SCROLL FOR NEXT