ಬೆಂಗಳೂರು: ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಸಾವಿಗು ನಾಲ್ಕು ದಿನಗಳ ಮುನ್ನ ಮಾತನಾಡಿದ್ದರು ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.
ಅಷ್ಟಮಠಗಳ ಇತರ ಯತಿಗಳು ತಮ್ಮ ವಿರುದ್ಧ ಸಂಚು ಹೂಡಿದ್ದರು ಮತ್ತು ಇದಕ್ಕಾಗಿ ಖಾಸಗಿ ಸುದ್ದಿವಾಹಿನಿಗಳಿಗೆ ಹಣಕೊಟ್ಟು ನನ್ನ ವಿರುದ್ಧ ಪಿತೂರಿ ನಡೆಸಿದ್ದರು ಎಂದು ಆಡಿಯೋದಲ್ಲಿ ಶಿರೂರು ಶ್ರೀ ಆರೋಪಿಸಿದ್ದಾರೆ. ಅಲ್ಲದೆ ಈ ಹಿಂದೆಯೂ ಮಠದ ಕೆಲವು ಸ್ವಾಮೀಗಳನ್ನು ಜೀವಂತ ಶವ ಮಾಡಲಾಗಿತ್ತು. ಈಗ ನನ್ನನ್ನು ಮುಗಿಸಲು ಹೊರಟಿದ್ದಾರೆ ಎಂದು ದೂರಿದ್ದಾರೆ.
ಕೃಷ್ಣಾಪುರ ಮಠದ ಹಿರಿಯ ಯತಿಗಳಿಗೆ ಆರು ಹೆಣ್ಣುಮಕ್ಕಳಿದ್ದಾರೆ. ನಾನು ಒಂದು ಧರ್ಮದಲ್ಲಿದ್ದವನು. ತಪ್ಪು ಮಾಡಿದ್ದು ನಿಜ. ಆದರೆ ಇವರೆಲ್ಲ ಮಾಡಿರುವ ತಪಪ್ಪುಗಳ ಮುಂದೆ ನನ್ನದು ಏನೇನೂ ಅಲ್ಲ. ಅಷ್ಟಮಠಗಳಲ್ಲಿ ಸೆಕ್ಸ್ ಎಂಬುದು ಹಿಂದೆಯೂ ಇತ್ತು. ಇನ್ನು ಮುಂದೆ ಕೂಡ ಇರುತ್ತದೆ. ಪುತ್ತಿಗೆ ಮಠದ ಶತಾಯುಷಿ ಸುಧೀದ್ರ ತೀರ್ಥರಿಗೆ ಅಕ್ಕಯ್ಯ ಎಂಬ ಮಹಿಳೆ ಜತೆ ಸಂಬಂಧವಿತ್ತು. ತನ್ನ ಮಗನಿಗೇ ಅವರು ದೀಕ್ಷೆ ಕೊಟ್ಟಿದ್ದರು. ಇದರ ವಿರುದ್ಧ ಏಳು ಸ್ವಾಮೀಜಿಗಳು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುದೀಂದ್ರರ ತೀರ್ಥರಿಗೇ ಜಯ ಸಿಕ್ಕಿತ್ತು. ಅವರ ಮಗ ಪರ್ಯಾಯವನ್ನೂ ಪೂರೈಸಿದರು. ಅವರು ವಿಧಿವಶರಾಗಿ ಅವರ ವೃಂದಾವನ ಉಡುಪಿಯಲ್ಲಿದೆ. ಉಳಿದವರು ಎಷ್ಟು ಸರಿ ಇದ್ದಾರೆ? ಪ್ರಾಣ ದೇವರ ಮುಂದೆ ಬಂದು ಹೇಳಲಿ ಎಂದಿದ್ದಾರೆ.
ಇನ್ನು ಅಜ್ಜನಿಗೂ ಮೂವರು ಮಕ್ಕಳಿದ್ದಾರೆ. ಒಬ್ಬರು ಡಾ.ಉಷಾ ಅಂತ. ಚೆನ್ನೈನಲ್ಲಿ ವೈದ್ಯರಾಗಿದ್ದಾರೆ. ಅಜ್ಜ ತಮಿಳುನಾಡಿನಲ್ಲಿ ಮಹಿಳೆ ಜತೆ ಸಂಬಂಧ ಹೊಂದಿದ್ದರು. ಆ ಮಹಿಳೆ ಇತ್ತೀಚಿಗೆ ತೀರಿಕೊಂಡರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಮಹಿಳೆಗೂ ಮೂವರು ಮಕ್ಕಳಿದ್ದಾರೆ. ನಿಮ್ಮ ಜೊತೆ ಬರುತ್ತೇವೆ ಎಂದು ಅವರು ಹೇಳಿದ್ದರು. ಅಲ್ಲದೆ ಡಿಎನ್ಎ ಪರೀಕ್ಷೆಗೂ ಸಿದ್ಧ ಎಂದು ಉಷಾ ಹೇಳಿದ್ದರು. ಅವರಿಗೆಲ್ಲ ಮಠಕ್ಕೆ ಪ್ರವೇಶ ಇಲ್ಲ. ಪಾಪ. ಸ್ವಾಮೀಜಿಗಳ ಶಾಸ್ತ್ರ ಪ್ರಕಾರ ಕುದುರೆ ಮೇಲೆ ಕುಳಿತುಕೊಳ್ಳುವಂತಿಲ್ಲ. ಆದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಲಾಗುತ್ತಿದೆ ಎಂದು ಶಿರೂರು ಶ್ರೀಗಳು ಹೇಳಿದ್ದಾರೆ.
ನಾನು ಅವರನ್ನು ನಂಬಿ ಪಟ್ಟದ ದೇವರನ್ನು ಕೊಟ್ಟಿದೆ. ಆದರೆ ವಿಶ್ವಾಸಘಾತಕತನ ಮಾಡಿದರು. ನಾನು ಸನ್ಯಾಸ ತ್ಯಜಿಸಬೇಕು ಎನ್ನಲು ಇವರು ಯಾರು? ಎಂದು ಆಡಿಯೋದಲ್ಲಿ ಶ್ರೀಗಳು ಪ್ರಶ್ನಿಸಿದ್ದಾರೆ.