ವಿಜಯಪುರ: ಜೆ.ಎಚ್. ಪಟೇಲ್ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ವಿಮಲಾಬಾಯಿ ದೇಶಮುಖ್ (69) ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ನಾಲತವಾಡ ಪಟ್ಟಣದ ವಿಮಲಾಬಾಯಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಅವರಲ್ಲಿ ಓರ್ವ ಪುತ್ರಿ ನಂದಿನಿ ಮಹಾರಾಷ್ಟ್ರದ ಯಾವತ್ ಮಲ್ ನಲ್ಲಿ ವಾಸವಾಗಿದ್ದಾರೆ.
ವಿಮಲಾಬಾಯಿಯವರ ಪತಿ ಜೆ.ಎಸ್. ದೇಶಮುಖ್ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು ಮಾತ್ರವಲ್ಲದೆ ಮುದ್ದೇಬಿಹಾಳ ಕ್ಷೇತ್ರದಿಂದ ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ಉಳುವವನೇ ಭೂ ಒಡೆಯ ನಿತಿ ಜಾರಿಗೆ ಬಂದ ಬಳಿಕ ದೇಶಮುಖ್ ಕುಟುಂಬ ತಾವು ಸಾವಿರಾರು ಎಕರೆ ಭೂಮಿಯನ್ನು ದಾನ ನೀಡಿ ಉದಾರತೆ ಮೆರೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದು,.
1994ರಲ್ಲಿ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಮಲಾಬಾಯಿ ಆಗ ಸಚಿವರಾಗಿದ್ದ ಸಿ.ಎಚ್. ನಾಗೇಗೌಡರನ್ನು ಪರಾಭವಗೊಳಿಸಿದ್ದರು. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಹ ಕಾರ್ಯನಿರ್ವಹಿಸಿದ್ದ ಇವರು ನಂತರದಲ್ಲಿ ಹಲವು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಜಯ ಗಳಿಸಿರಲಿಲ್ಲ. ವಿಮಲಾಬಾಯಿ2003ರಲ್ಲಿ ಕೆಜೆಪಿಯಿಂದ ಸ್ಪರ್ಧೆಗಿಳಿದು ಸುದ್ದಿಯಾಗಿದ್ದರು.
ಮೃತರ ಪಾರ್ಥಿವ ಶರೀರವನ್ನು ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಇಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು ಜು.23ರಂದು ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos