ಬೆಂಗಳೂರು: ಭಾನುವಾರ ಬೆಳಗಿನ ಜಾವ ಕಾರು-ಬಸ್ ನಡುವೆ ಡಿಕ್ಕಿ ಸಂಭವಿಸಿ ಉಂಟಾದ ಭೀಕರ ಅಪಘಾತಕ್ಕೆ ಇಬ್ಬರು ಸಜೀವ ದಹನವಾದ ಘಟನೆ ಬೆಂಗಳೂರಿನ ಚಂದಾಪುರ ಸಮೀಪ ನಡೆದಿದೆ.
ಹೊಸೂರು ಮುಖ್ಯ ರಸ್ತೆಯ ಚಂದಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಬಳಿಕ ಎದುರಿನಿಂದ ಬರುತ್ತಿದ್ದ ಕಾರಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಕಾರನ್ನು ಸಂಪೂರ್ಣ ಆವರಿಸಿದ ಬೆಂಕಿ ಕಾರಿನಲ್ಲಿದ್ದ ಇಬ್ಬರ ಸಜೀವ ದಹನಕ್ಕೆ ಕಾರಣವಾಗಿದೆ.
ಇತ್ತ ಬಸ್ಸಿಗೆ ಸಹ ಬೆಂಕಿ ಹತ್ತಿಕೊಂಡಿದ್ದು ಬಸ್ಸಿನಲ್ಲಿದ್ದ ಸುಮಾರು 20ಕ್ಕೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ತಕ್ಷಣ ಬಸ್ಸಿನಿಂದ ಹೊರಬಂದಿದ್ದು ಯಾವ ಪ್ರಾಣಾಪಾಯಗಳಾಗದೆ ಪಾರಾಗಿದ್ದಾರೆ.
ಘಟನೆಗೆ ಕಾರಣನಾದ ಬಸ್ ಚಾಲಕ ಪರಾರಿಯಾಗಿದ್ದು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಸೂರ್ಯ ಸಿಟಿ ಪೋಲೀಸರು ಭೇಟಿ ಕೊಟ್ಟಿದ್ದಾರೆ. ಖಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಬೆಂಕಿಗಾಹುತಿಯಾದವರ ಗುರುತು ಪತ್ತೆಯಾಗಿಲ್ಲ.