ಬೆಂಗಳೂರು: ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸ್ನೇಹಿತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಉದ್ಯಮಿ ಸತೀಶ್ ಕುಮಾರ್ ಎಂಬುವರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ನಾಯಂಡಹಳ್ಳಿ ನಿವಾಸಿ ಲತೇಶ್ (30 ) ಮೃತ ವ್ಯಕ್ತಿಯಾಗಿದ್ದಾರೆ. ಆಟೋ ಚಾಲಕನಾಗಿದ್ದ ಲತೀಶ್ ಹಾಗೂ ಸತೀಶ್ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಇಬ್ಬರು ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದರು. ಈ ಮಹಿಳೆಯಿಂದ ದೂರ ಇರುವಂತೆ ಸತೀಶ್ ಹಲವು ಬಾರಿ ಲತೀಶ್ ಗೆ ಎಚ್ಚರಿಕೆ ನೀಡಿದ್ದು, ಕಳೆದ ನಾಲ್ಕು ತಿಂಗಳಿಂದ ಸಂಪರ್ಕ ಕಳೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, ಸತೀಶ್ ಭಾನುವಾರ ರಾತ್ರಿ ಬಾರ್ ನಲ್ಲಿರಬೇಕಾದರೆ ಅಲ್ಲಿ ಲತೀಶ್ ಇರುವುದನ್ನು ಗುರುತಿಸಿದ್ದಾನೆ. ಅಡುಗೆಯವರು ಬೇಗ ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಲತೀಶ್ ಜೊತೆ ಕುಳಿತಿದ್ದ ಅಡುಗೆ ಸಹಾಯಕ ಜಗಳ ತೆಗೆದು ಆತನ ಮೇಲೆ ಹಲ್ಲೆ ನಡೆಸಿದ್ದಾನೆ.
ನಂತರ ಬಾರ್ ಸಿಬ್ಬಂದಿ ಆತನನ್ನು ಹೊರಗೆ ಕಳುಹಿಸಿದ್ದಾರೆ. ಇದರಿಂದ ಕುಪಿತಗೊಂಡ ಸತೀಶ್ ಜೆಜೆ ನಗರದಲ್ಲಿನ ಮನೆಗೆ ಬಂದು ಪರವಾನಗಿ ಹೊಂದಿದ್ದ ಪಿಸ್ತೂಲ್ ತೆಗೆದುಕೊಂಡು ಹೋಗಿ ಲತೀಶ್ ಮೇಲೆ ಹಾರಿಸಿ ಕೊಲೆ ಗೈದಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬ್ಯಾಟರಿ ಮಾರಾಟ ವ್ಯವಹಾರ ನಡೆಸುತ್ತಿದ್ದ ಸತೀಶ್, ನಾಲ್ಕು ವರ್ಷಗಳಿಂದ ಪರವಾನಗಿ ಹೊಂದಿದ್ದ ಬಂದೂಕು ಹೊಂದಿದ್ದ. ಆದಾಗ್ಯೂ ಆತ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಲಿಲ್ಲ. ಪ್ರಕರಣ ಸಂಬಂಧ ಮಹಿಳೆಯಿಂದಲೂ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.