ಮೂಢನಂಬಿಕೆ ಹೋಗಲಾಡಿಸಲು ಚಂದ್ರಗ್ರಹಣದಂದೇ ದಾಂಪಂತ್ಯ ಜೀವನಕ್ಕೆ ಕಾಲಿಟ್ಟ ಜೋಡಿ!
ಬೆಂಗಳೂರು: ಖಗ್ರಾಸ ಚಂದ್ರ ಗ್ರಹಣ ಹಿನ್ನಲೆಯಲ್ಲಿ ಆಸ್ತಿಕರು ರಾತ್ರಿಯಿಡೀ ಜಪ-ತಪದಲ್ಲಿ ನಿರತರಾಗಿದ್ದರೆ, ಇನ್ನು ಕೆಲವೆಡೆ ನಾಸ್ತಿಕರು ಈ ಶತಮಾನದ ಅಪರೂಪದ ಖಗೋಳಕೌತುಕವನ್ನು ಬಹಿಗಣ್ಣಿನಿಂದ ಕಣ್ತುಂಬಿಕೊಂಡರು.
ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ಬಹುತೇಕ ಕಡೆ ಪ್ರಮುಖ ರಸ್ತೆಗಳು ಜನ, ವಾಹನಗಳ ಓಡಾಟವಿಲ್ಲದೆ ಖಾಲಿಖಾಲಿಯಾಗಿದ್ದವು. ಗ್ರಹಣದ ಕಾಲದಲ್ಲಿ ಕೆಟ್ಟದ್ದಾಗುತ್ತದೆ ಎಂಬುದು ಹಲವರ ನಂಬಿಕೆಯಾಗಿದ್ದು, ಈ ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಸಲುವಾಗಿ ಇಲ್ಲೊಂದು ನವಜೋಡಿ ಚಂದ್ರಗ್ರಹಣದ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.
ಮಕ್ಕಳಿಗೆ ಲಿಂಗ ದೀಕ್ಷೆ ನೀಡಿದ ಮುರುಘಾ ಮಠದ ಡಾ. ಶಿವಕುಮಾರ್ ಮುರುಘಾ ಶರಣರು, ಚಂದ್ರಗ್ರಹಣದ ದಿನದಂದೇ ವಿವಾಹ ನಡೆಸಲು ವ್ಯವಸ್ಥೆ ಮಾಡಿದ್ದರು. ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಮರಾಡಿ ರಂಗನಾಯಕ ಮತ್ತು ವಸಂತ ಎಂಬ ಜೋಡಿ ಚಂದ್ರಗ್ರಹಣದ ಸಂದರ್ಭದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿವಾಹ ಕಾರ್ಯಕ್ರಮದ ಬಳಿಕ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಚಂದ್ರಗ್ರಹಣ ಆಗಸದಲ್ಲಿ ನಡೆಯುವ ಕೌತುಕವಷ್ಟೇ. ಅದು ನೈಸರ್ಗಿಕವಾಗಿ ಸಂಭವಿಸುತ್ತವೆ. ಆದರೆ, ಇದನ್ನೇ ಗಾಳವಾಗಿ ಬಳಸಿಕೊಳ್ಳುತ್ತಿರುವ ಕೆಲವರು ಜನರಲ್ಲಿ ಭಯವನ್ನು ಹುಟ್ಟಿಸುತ್ತಿದ್ದಾರೆ. ಇಂತಹ ಮಾತುಗಳನ್ನು ಸಾರ್ವಜನಿಕರು ಕೇಳಬಾರದು ಎಂದು ಹೇಳಿದ್ದಾರೆ.
ಚಂದ್ರಗ್ರಹಣ ಸಂದರ್ಭದಲ್ಲಿಯೂ ನಾನೂ ಆಹಾರವನ್ನು ಸೇವಿಸಿದ್ದೆ. ಈ ವರೆಗೂ ನನಗೇನೂ ಆಗಿಲ್ಲ. ಮೂಢನಂಬಿಕೆಗಳಿಂದ ಜನರು ಹೊರ ಬರಬೇಕೆಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ದಾವಣಗೆರೆ ವೀರಖ್ತ ಮಠದ ಮುಖ್ಯಸ್ಥ ಬಸವಪ್ರಭು ಸ್ವಾಮಿಗಳು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಅಧ್ಯಕ್ಷ ಚಳ್ಳಕೆರೆ ಯೆರ್ರಿಸ್ವಾಮಿ, ಕಾರ್ಯದರ್ಶಿ ಹೆಚ್ಎಸ್'ಟಿ ಸ್ವಾಮಿ, ಇತಿಹಾಸಕಾರ ಡಾ.ಬಿ. ರಾಜಶೇಖರಪ್ಪ, ಕೆ.ಎಂ.ವೀರೇಶ್, ಸಿಎಂ ವೀರಣ್ಣ, ಗಾಯತ್ರಿ ಶಿವರಾಮ್ ಮತ್ತು ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos