ಸಿಎಂ ಭೇಟಿ ಮಾಡಿದ ದಾವಣಗೆರೆ ಮಹಿಳೆ
ಬೆಂಗಳೂರು: ಮುಖ್ಯಮಂತ್ರಿ ಅವರ ಜೆಪಿನಗರದ ಮನೆಯಲ್ಲಿ ನಡೆದ ಜನತಾ ದರ್ಶನದಲ್ಲಿ ದಾವಣೆಗೆರೆ ಮಹಿಳೆಯೊಬ್ಬರು ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಆಕೆಯ ಸಂತೋಷ ಇಮ್ಮಡಿಯಾಗಿದೆ.
ದಾವಣಗೆರೆಯಿಂದ ಬಂದಿದ್ದ ಶೈಲಾ ಎಂಬಾಕೆಯ ಬಲಕೈ ಕತ್ತಿರಿಸಿದ್ದು, ಮತ್ತೊಂದು ಕೈಯ್ಯಲ್ಲಿ ಧೈರ್ಯವಾಗಿ ಮಗುವನ್ನು ಎತ್ತಿಕೊಂಡು ಬಂದು ಸಿಎಂ ಭೇಟಿ ಮಾಡಿದರು.
ಇಲ್ಲಿಗೆ ಏಕೆ ಬಂದಿರುವುದಾಗಿ ಆಕೆಯನ್ನು ಸಿಎಂ ಪ್ರಶ್ನಿಸಿದರು. ಅದಕ್ಕುತ್ತರಿಸಿದ ಆಕೆ, ರಸ್ತೆ ಅಪಘಾತದಲ್ಲಿ ತಾನು ಬಲ ಕೈ ಕಳೆದುಕೊಂಡಿದ್ದು, ತಾನು ಟಾಪ್ ರೈಟಿಂಗ್ ಕಲಿತಿರುವುದಾಗಿ ತಿಳಿಸಿದ್ದಾರೆ, ತನಗೆ ಎಲ್ಲೂ ಕೆಲಸ ಸಿಗುತ್ತಿಲ್ಲ, ಜೊತೆಗೆ ಸರ್ಕಾರದ ಅಂಗವಿಕಲ ಪಿಂಚಣಿಯೂ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ನಂತರ ಆಕೆಯನ್ನು ವಿಧಾನ ಸೌಧಕ್ಕೆ ಬರುವಂತೆ ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ. ಜೊತೆಗೆ ದಾವಣಗೆರೆಯ ಅಧಿಕಾರಿಗಳಿಗೆ ಕರೆ ಮಾಡಿ ಆಕೆಗೆ ತಾತ್ಕಾಲಿಕ ನೌಕರಿ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಹಾಗೂ ಆಕೆಗೆ ಅಂಗವಿಕಲರ ಪಿಂಚಣಿ ನೀಡುವಂತೆಯೂ ಸೂಚಿಸಿದ್ದಾರೆ.
ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ವ್ಯವಸ್ಥೆಯಲ್ಲಿ ನಮಗೆ ಹಲವು ಅವಕಾಶಗಳಿವೆ, ಅಸಂಘಟನಾತ್ಮಕ ವಲಯದಲ್ಲಿಯೂ ಕೆಲಸದ ಅವಕಾಶಗಳಿವೆ, ನೀತಿ ನಿಯಮಗಳನ್ನು ವಿಸ್ತರಿಸಲು ಸರ್ಕಾರ ಸಿದ್ಧವಿರಬೇಕು. ರಾಜ್ಯದಲ್ಲಿ ಹಲವು ಮಂದಿ ಸದ್ದಿಲ್ಲದೇ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ, ಅಂತಹ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.