ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ಹಾಗೂ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಚುನಾವಣೆ ಕುರಿತಂತೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಎಂ. ಮಹೇಶ್ವರ್ ರಾವ್, ಮತದಾನ ಜಾಗೃತಿ ಮೂಡಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾರ್ಡ್ ವಾರು ಆಟೋದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ವ್ಯವಸ್ಥೆ ಮಾಡಲಾಗಿತ್ತು ಎಂದರು.
ಇವಿಎಂ ಮತ್ತು ವಿವಿಪ್ಯಾಟ್ ವ್ಯವಸ್ಥೆ ಕುರಿತಂತೆ ಮತದಾರರಿಗೆ ಶಿಕ್ಷಣ ನೀಡಲಾಗಿದೆ. ಇವುಗಳ ಬಳಕೆ ಕುರಿತಂತೆ ಸ್ವೀಪ್, ಹಾಗೂ ತರಬೇತುದಾರರು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಮತದಾನದ ದಿನವೂ ಸಹ ಆಟೋದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಸೋಮವಾರ ಬೆಳ್ಳಿಗೆ 7 ರಿಂದ ಸಂಜೆ 6 ರವರೆಗೂ ಮತದಾನ ನಡೆಯಲಿದ್ದು, ಬುಧವಾರ ಎಸ್ ಎಸ್ ಎಂ ಆರ್ ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. 19 ಅಭ್ಯರ್ಥಿಗಳು ಕಣದಲ್ಲಿದ್ದು, 216 ಮತಗಟ್ಟೆಗಳ ಪೈಕಿ ಐದು ಮತಗಟ್ಟೆಗಳನ್ನು ಸಖಿ ಪಿಂಕ್ ಮತಗಟ್ಟೆಗಳೆಂದು ಪರಿಗಣಿಸಲಾಗಿದ್ದು, ಅದರಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಇರಲಿದ್ದು, ಮಹಿಳೆಯರು ಮಾತ್ರ ಮತ ಚಲಾಯಿಸುವಂತೆ ಅವಕಾಶ ಮಾಡಿಕೊಡಲಾಗುವುದು ಎಂದರು.