ಬೆಂಗಳೂರು: 15 ಸಾವಿರ ರು ಹಣಕ್ಕಾಗಿ ಚಿಕ್ಕಮ್ಮನನ್ನು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು 3 ಗಂಟೆಯಲ್ಲಿ ಬಂಧಿಸಿದ್ದಾರೆ.
ಬಾಗಲೂರಿನ ನಿವಾಸಿ ಮುನಿಯಮ್ಮ (78) ಕೊಲೆಯಾದ ವೃದ್ಧೆ. ಈ ಕೃತ್ಯ ಎಸಗಿದ ಆರೋಪದ ಮೇಲೆ ಮುನಿಯಮ್ಮನ ತಂಗಿಯ ಮಗ ಗಣೇಶನನ್ನು ಪ್ರಕರಣ ನಡೆದ ಮೂರೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ 11ರ ಸುಮಾರಿಗೆ ಈ ಪ್ರಕರಣ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಗಣೇಶ್ ಮದ್ಯ ವ್ಯಸನಿಯಾಗಿದ್ದ. ಕುಡಿಯಲು ಹಣ ಕೊಡುವಂತೆ ದೊಡ್ಡಮ್ಮನ ಬಳಿ ಕೇಳಿದ್ದು, ಹಣ ಕೊಡಲು ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುನಿಯಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದ ಬೇರೆಬೇರೆ ಮನೆ ಮಾಡಿಕೊಂಡು ಬಾಗಲೂರಿನಲ್ಲಿ ನೆಲೆಸಿದ್ದಾರೆ.
ಮುನಿಯಮ್ಮ ಅವರ ಮನೆಗೆ ಮಲಗಲು ಬರುತ್ತಿದ್ದ ತಂಗಿ ಮುನಿಯಮ್ಮ ಮನೆಗೆ ಹೋಗಿ ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಕಿಟಕಿಯಲ್ಲಿ ಇಣುಕಿದ್ದಾರೆ. ಆಗ ಒಳಗಡೆ ಗಣೇಶ್ ಇರುವುದನ್ನು ನೋಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗಣೇಶ್ನನ್ನು ಕರೆದು ಬಾಗಿಲು ತೆರೆಯುವಂತೆ ಅವರು ಹೇಳಿದ್ದಾರೆ. ಬಾಗಿಲು ತೆರೆದ ಮರು ಕ್ಷಣವೇ ಗಣೇಶ್ ಅಲ್ಲಿಂದ ಓಡಿಹೋಗಿದ್ದಾನೆ. ಸಂಶಯಗೊಂಡು ಒಳಗೆ ಹೋಗಿ ನೋಡಿದಾಗ ಮುನಿಯಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರ ಕೊರಳಲ್ಲಿದ್ದ ಚಿನ್ನದ ಸರ, ಬಳೆ ಮತ್ತು ನಗದು ಕಳವಾಗಿತ್ತು. ತಕ್ಷಣವೇ ಮುನಿಯಮ್ಮ ತಂಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಬ್ಯಾಂಕ್ಗೆ ಹೋಗಿದ್ದ ಮುನಿಯಮ್ಮ ₹15 ಸಾವಿರ ಡ್ರಾ ಮಾಡಿಕೊಂಡು ಬಂದಿದ್ದರು. ಈ ವಿಚಾರ ತಿಳಿದಿದ್ದ ಗಣೇಶ್ ಕುಡಿಯಲು ಹಣ ಕೊಡುವಂತೆ ದೊಡ್ಡಮ್ಮನ ಹಿಂದೆ ಬಿದ್ದಿದ್ದ ಎಂದು ಮುನಿಯಮ್ಮ ಅವರ ತಂಗಿ ಪೊಲೀಸರಿಗೆ ತಿಳಿಸಿದ್ದಾರೆ.