ಚಾಮರಾಜನಗರ: ಮರಿ ಆನೆಯ ರಕ್ಷಣೆಗಾಗಿ ನಿಂತ ತಾಯಿ ಆನೆ ಚಿಕ್ಕಮಗಳೂರು-ಕೋಳಿಕೋಡುಗೆ ಪ್ರಯಾಣಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಬಸ್ ಮೇಲೆ ದಾಳಿಗೆ ಮುಂದಾಗಿದ್ದು ಈ ವೇಳೆ ಬಸ್ ನಲ್ಲಿದ್ದ 60 ಮಂದಿ ಪ್ರಯಾಣಿಕರ ಎದೆ ಝಲ್ ಎಂದಿತ್ತು.
ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಕೆಎಸ್ಆರ್ಟಿಸಿ ಬಸ್ ಬಂಡಿಪುರ ರಾಷ್ಟ್ರೀಯ ಉದ್ಯಾವನದಲ್ಲಿ ಹೋಗುತ್ತಿದ್ದ ವೇಳೆ ಆನೆ ದಾಳಿ ಮಾಡಿದೆ. ಇದನ್ನು ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ತಾಯಿ ಆನೆ ಅಟ್ಟಿಸಿಕೊಂಡು ಬರುತ್ತಿರುವುದನ್ನು ಗಮನಿಸಿದ ಬಸ್ ನ ಚಾಲಕ ಸುಮಾರು 100 ಮೀಟರ್ ದೂರದವರೆಗೆ ಬಸ್ ಅನ್ನು ಹಿಮ್ಮುಖವಾಗಿ ಚಲಾಯಿಸಿದರು ಬಿಡದ ಆನೆ ಬಂದ ಬಸ್ ನ ಮುಂಭಾಗದ ಗಾಜಿಗೆ ಗುದ್ದಿದ್ದು ಇದರಿಂದ ಗಾಜು ಹೊಡೆದಿದೆ.
ರಾಷ್ಟ್ರೀಯ ಉದ್ಯಾನವನ ಹೆದ್ದಾರಿಯಲ್ಲಿ ಐದರಿಂದ ಆರು ಆನೆಗಳ ಹಿಂಡು ನಿಂತಿದ್ದು ಈ ವೇಳೆ ಬಸ್ ಅದೇ ರಸ್ತೆಯಲ್ಲಿ ಪ್ರಯಾಣಿಸುವಾಗ ಈ ದಾಳಿ ನಡೆದಿದೆ. ಹಿಂಡಿನಲ್ಲಿ ಮರಿ ಆನೆ ಇದ್ದಿದ್ದರಿಂದ ತಾಯಿ ಆನೆ ಬಸ್ ಮೇಲೆ ದಾಳಿಗೆ ಮುಂದಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.