ಮಡಿಕೇರಿ: ಕೊಡಗು ಜಿಲ್ಲೆಯ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನು ಕೂಡಲೇ ಬಂಧನಕ್ಕೊಳಪಡಿಸುವಂತೆ ಒತ್ತಾಯಿಸಿ ಮೃತ ವಿದ್ಯಾರ್ಥಿಯ ಪೋಷಕರು ಹಾಗೂ ಕೊಡವ ಸಮಾಜ ಜಿಲ್ಲಾ ಆಸ್ಪತ್ರೆಯ ಶವಾಗಾರದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.
ಪೊಲೀಸರಿಗೆ ದೂರು ನೀಡಿದ್ದರೂ, ಈ ವರೆಗೂ ಆರೋಪಿಗಳ ಬಂಧನವಾಗಿಲ್ಲ ಎಂದು ಆರೋಪಿಸಿರುವ ಪೋಷಕರು, ಮರಣೋತ್ತರ ಪರೀಕ್ಷೆಗೆ ಬಿಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.
ಸೈನಿಕ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಎನ್.ಪಿ.ಚಿಂಗಪ್ಪ ಎಂಬ ವಿದ್ಯಾರ್ಥಿ ಶಾಲೆಯ ಶೌಚಾಲಯದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ವಿದ್ಯಾರ್ಥಿಯ ಮೃತಹೇದ ಶನಿವಾರ ಸಂಜೆ ಪತ್ತೆಯಾಗಿತ್ತು.
ಶೌಚಾಲಯದಲ್ಲಿ ವಿದ್ಯಾರ್ಥಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತ. ಬಳಿಕ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದ ವೈದ್ಯರು ವಿದ್ಯಾರ್ಥಿ ಮೃತಪಟ್ಟಿರುವುದಾಗಿ ತಿಳಿಸಿದ್ದರು ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.
ಚಿಂಗಪ್ಪ, ಶಾಲೆ ಹಾಕಿ ತರಬೇತುದಾರರಾಗಿರುವ ನಗಂಡ ಟಿ.ಪೂವಯ್ಯ ಅವರ ಪುತ್ರನಾಗಿದ್ದಾನೆ. ಪ್ರಕರಣ ಸಂಬಂಧ ಶಾಲೆಯ ಉಪ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಮಧ್ಯಪ್ರವೇಶ ಮಾಡಿದ ಎಂಎಲ್'ಸಿ ಸುನೀಲ್ ಸುಬ್ರಮಣಿಯವರು ಸಂಸದ ಪ್ರತಾಪ್ ಸಿಂಹ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಎಸ್'ಪಿ ರಾಜೇಂದ್ರ ಪ್ರಸಾದ್ ಅವರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಶಾಲೆಯ ಐವರು ಸಿಬ್ಬಂದಿಗಳು ಹಾಗೂ ಉಪ ಪ್ರಾಂಶುಪಾಲರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕುಶಾಲನಗರ ಇನ್ಸ್ ಪೆಕ್ಟರ್ ಕ್ಯಾತೆಗೌಡ ಅವರು ಮಾತನಾಡಿ, ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದೆ. ಬಾಲಕನ ತಂದೆ ಪೂವಯ್ಯ ಅವರು ಐವರು ಶಾಲಾ ನೌಕರರು ಹಾಗೂ ಉಪ ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದಾರೆ. ಪ್ರಯೋಗಲಾಯದಲ್ಲಿ ಬಳಕೆ ಮಾಡುತ್ತಿದ್ದ ವಿಷಕಾರಿ ಅಂಶವನ್ನು ಬಾಲಕ ಸೇವನೆ ಮಾಡಿರಬಹುದು ಇದರಿಂದ ಆತ ಸಾವನ್ನಪ್ಪಿರಬಹುದು ಎಂದು ಪೊಲೀಸರಿಗೆ ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಶನಿವಾರ ಸಂಜೆ 6 ಗಂಟೆಗೆ ಶಾಲೆಯಿಂದ ಕರೆಯೊಂದು ಬಂದಿತ್ತು. ಈ ವೇಳೆ ನನ್ನ ಮಧ್ಯಾಹ್ನ 2 ಗಂಟೆಯಿಂದಲೂ ಕಾಣುತ್ತಿಲ್ಲ ಎಂದು ತಿಳಿಸಿದ್ದರು. ರಾತ್ರಿ 7.45ಕ್ಕೆ ನನ್ನ ಮಗ ಸಾವನ್ನಪ್ಪಿದ್ದಾನೆಂದು ತಿಳಿಸಿದರು. ಪುತ್ರನ ಮೃತದೇಹ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು ಎಂದು ಹೇಳಿದರು. ಕಂಪ್ಯೂಟರ್, ಕನ್ನಡ ಮತ್ತು ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ವಾರ್ಡನ್ ನನಗೆ ಹಿಂಸೆ ನೀಡುತ್ತಿದ್ದಾರೆಂದು ನನ್ನ ಮಗ ಈ ಹಿಂದಿನಿಂದಲೂ ಹೇಳುತ್ತಲೇ ಇದ್ದ. ಈ ಬಗ್ಗೆ ನಾನು ಉಪ ಪ್ರಾಂಶುಪಾಲರಿಗೆ ದೂರು ನೀಡಿದ್ದೆ. ಆದರೆ, ದೂರನ್ನು ಅವರು ನಿರ್ಲಕ್ಷಿಸಿದ್ದರು ಎಂದು ಮೃತ ವಿದ್ಯಾರ್ಥಿ ತಂದೆ ಪೂವಯ್ಯ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos