ಚಿಕ್ಕಮಗಳೂರು : ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಬಳಿಯಲ್ಲಿ ಸಮರ್ಪಕವಾದ ಹಣ ಲಭ್ಯವಿರುವುದಾಗಿ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ 393 ಮಿಲಿ ಮೀಟರ್ ಮಳೆಯಾಗಿದೆ. ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಪಿಡಿ ನಿಧಿಯಲ್ಲಿ 5.90 ಕೋಟಿ ರೂ. ಹಣ ಇರಿಸಲಾಗಿದೆ. ಪ್ರತಿ ತಾಲೂಕುಗಳಿಗೂ 20 ಲಕ್ಷ ರೂಪಾಯಿ ನೀಡಲಾಗಿದ್ದು, ಏಲ್ಲಿಯೂ ನಿಧಿಯ ಕೊರತೆ ಇಲ್ಲ ಎಂದು ಸ್ಪಷ್ಪಪಡಿಸಿದರು.
ಮಳೆಯಿಂದಾಗಿ ಮಾನವ ಪ್ರಾಣಿ ಹಾನಿ ಕುರಿತು ಎಲ್ಲಿಯೂ ವರದಿಯಾಗಿಲ್ಲ, ಆದರೆ, ಶೃಂಗೇರಿ ಶಾಸಕರು ಒಬ್ಬರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮಳೆಯಿಂದಾಗಿ ಮೃತ ಕುಟುಂಬ ಸದಸ್ಯರಿಗೆ 5 ಲಕ್ಷ ರೂ. ಶೇ. 75 ರಷ್ಟು ಮನೆ ಹಾನಿಗೊಳಗಾದವರಿಗೆ 95 ಸಾವಿರ, ಪೂರ್ತಿ ಹಾನಿಯಾಗಿದ್ದರೆ 1 ಲಕ್ಷದ 1 ಸಾವಿರ ರೂಪಾಯಿ ನೀಡಲಾಗುತ್ತಿದ್ದು, ಒಟ್ಟಾರೇ, ಮಳೆಯಿಂದಾದ ಸಾರ್ವಜನಿಕ ಆಸ್ತಿಪಾಸ್ತಿ ಮೊತ್ತ ಅಂದಾಜು 24. 19 ಕೋಟಿಯಷ್ಟಿದೆ ಎಂದರು.