ರಾಜ್ಯ

ಬೆಂಗಳೂರಿನಲ್ಲಿ ನಟೋರಿಯಸ್ ರೌಡಿ ಸೈಕಲ್ ರವಿ ಮೇಲೆ ಗುಂಡಿನ ದಾಳಿ, ಬಂಧನ

Nagaraja AB
ಬೆಂಗಳೂರು : ಸುಮಾರು 30 ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ರೌಡಿ ಎಂ. ರವಿಕುಮಾರ್ ಆಲಿಯಾಸ್  ಸೈಕಲ್ ರವಿ (42)   ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ನಿನ್ನೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.
ರವಿ ಆರು ಕೊಲೆ ಹಾಗೂ ನಾಲ್ಕು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಬೆಂಗಳೂರಿನ ಸುಮಾರು 15ಕ್ಕೂ ಹೆಚ್ಚು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಗುಂಡಿನ ದಾಳಿಯಿಂದ ರವಿಯ ಹೊಟ್ಟೆ ಹಾಗೂ ಬಲಗಾಲಿಗೆ  ತೀವ್ರ ರೀತಿಯ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಆತನ ಚಲನವಲನದ ಬಗ್ಗೆ   ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನ ವಾಹನವನ್ನು ತಡೆಹಿಡಿದಿದ್ದಾರೆ. ಆಗ ಆತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಆದಾಗ್ಯೂ ಪೊಲೀಸರು  ಆತನನ್ನು ಬೆನ್ನಟ್ಟಿದ್ದಾರೆ. ಆಗ ಮತ್ತೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಆಗ ಗುರಿ ತಪ್ಪಿದ್ದು, ಆತ್ಮರಕ್ಷಣೆಗಾಗಿ  ಇನ್ಸ್ ಪೆಕ್ಟರ್  ಪ್ರಕಾಶ್ ಹಾಗೂ ಮಲ್ಲಿಕಾರ್ಜುನ್   ರವಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಕೂಡಲೇ ಆತನನ್ನು ಮೈಸೂರು ರಸ್ತೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಆತ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಕಲ್ ರವಿ 20 ವರ್ಷದಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. 1998ರಲ್ಲಿ ಆತನ ವಿರುದ್ಧ ಬನಶಂಕರಿ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗತ್ತು. ಈಗಲೂ ಕೂಡಾ ಎರಡು ಡಜನ್ ಕ್ಕಿಂತಲೂ ಹೆಚ್ಚು ಕೇಸ್ ಗಳಲ್ಲಿ ಆತ ತೊಡಗಿಸಿಕೊಂಡಿದ್ದು,  ಸುಪರಿ ಕಿಲ್ಲರ್, ಅಪಹರಣ, ದರೋಡೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು  ಹೇಳಿದ್ದಾರೆ.
2010ರಲ್ಲಿ ಕತ್ರಿಗುಪ್ಪೆಯಲ್ಲಿ ನಡೆದಿದ್ದ ಲಿಂಗಾ ಹತ್ಯೆ ಪ್ರಕರಣದಲ್ಲಿ ರವಿ ಪ್ರಮುಖ ಆರೋಪಿಯಾಗಿದ್ದಾನೆ. ಎನ್ ಕೌಂಟರ್ ನಲ್ಲಿ ಪೊಲೀಸರು ಸಾಯಿಸಬಹುದು ಎಂಬ ಭೀತಿಯಲ್ಲಿ  ಕೆಲ ದಿನಗಳ ಹಿಂದೆ ನ್ಯಾಯಾಲದಲ್ಲಿ ಆತ ಶರಣಾಗಿದ್ದ.
2009ರಲ್ಲಿ ಬಿಜೆಪಿ ಕಾರ್ಯಕರ್ತ ಚಂದ್ರಶೇಖರ್ ಬಾಬು ಹತ್ಯೆಯಲ್ಲೂ ಈತ ಭಾಗಿಯಾಗಿದ್ದ,. ನಂತರ ಈತನ ಆಪ್ತ ಪರಂದಾಮ ನನ್ನು  ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು.
SCROLL FOR NEXT