ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟ ಸುನಾಮಿ ಕಿಟ್ಟಿಯ ಅಪಹರಣ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಎಂಬಾತನ ಪತ್ನಿಗೆ ಸಪ್ಲೈಯರ್ ಗಿರೀಶ್ ಮತ್ತು ತೌಶಿಕ್ ಕಿರುಕುಳ ನೀಡಿದ್ದರಂತೆ.
ಈ ಬಗ್ಗೆ ಸುನಿಲ್ ಪತ್ನಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ತೌಶಿಕ್ ಸ್ನೇಹಿತನಾದ್ದರಿಂದ ಆತನೊಂದಿಗೆ ಸಲುಗೆಯಿಂದ ಇದ್ದೆ. ಆದರೆ ಆತ ಅದನ್ನೇ ದುರ್ಬಳಕೆ ಮಾಡಿಕೊಂಡು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ನಾನು ನಾನು ನನ್ನಪತಿ ಸುನಿಲ್ ಅವರಿಗೂ ಮಾಹಿತಿ ನೀಡಿದ್ದೆ. ತೌಶಿಕ್ ರನ್ನು ಕರೆಸಿಕೊಂಡಿದ್ದ ನನ್ನ ಪತಿ ಆತನ ಕಪಾಳಕ್ಕೆ ಹೊಡೆದು ಕಳುಹಿಸಿದ್ದರು.
ತೌಶಿಕ್ ಮತ್ತು ನಾನು ಸ್ನೇಹಿತರಾದ್ದರಿಂದ ಆಗಾಗ ಭೇಟಿ ಮಾಡುತ್ತಿದ್ದೆವು. ಅದರಂತೆ ಕಳೆದ ಫೆ. 25ರಂದು ಮರಿಯಪ್ಪನಪಾಳ್ಯದ ಕುಟೀರ್ ಪಾರ್ಕ್ ಬಳಿಯ ‘ಲ್ಯಾಂಡ್ ಬಾರ್ ಆ್ಯಂಡ್ ರೆಸ್ಟೊರೆಂಟ್’ಗೆ ಹೋಗಿದ್ದೆವು. ಅಂದು ಕೈ ತೊಳೆಲೆಂದು ನಾನು ವಾಶ್ ರೂಂಗೆ ಎದ್ದು ಹೋಗಿದ್ದಾಗ ತೌಶಿಕ್ ನನ್ನ ಮೊಬೈಲ್ ಅನ್ನು ತೆಗೆದುಕೊಂಡು ಅದರಲ್ಲಿ ನಾನು ನನ್ನ ಪತಿಗೆ ಕಳುಹಿಸಿದ್ದ ಮೆಸೇಜ್ ಗಳನ್ನು ತನಗೆ ಫಾರ್ವರ್ಡ್ ಮಾಡಿಕೊಂಡಿದ್ದಾನೆ. ಬಳಿಕ ಇದೇ ಮೆಸೇಜ್ ಗಳನ್ನು ತೋರಿ ನನ್ನನ್ನು ಹೆದರಿಸುತ್ತಿದ್ದ. ಈ ಬಗ್ಗೆಯೂ ನನ್ನ ಪತಿ ಸುನಿಲ್ ಗೆ ಹೇಳಿದ್ದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆಯ ಪತಿ ಸುನಿಲ್, ಕಿಟ್ಟಿ ಅವರ ಸ್ನೇಹಿತರಾಗಿದ್ದು, ಕಿಟ್ಟಿ ಮತ್ತು ಸಂಗಡಿಗರು ಸಪ್ಲೈಯರ್ ಗಿರೀಶ್ ಹಾಗೂ ತೌಶಿಕ್ ರನ್ನು ಕರೆಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಈ ಸಂಬಂಧ ಇದೀಗ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದಾರೆ.
ಕಿಟ್ಟಿ ಐದು ದಿನ ಪೊಲೀಸ್ ವಶಕ್ಕೆ
ಇನ್ನು ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ಆರೋಪಿ ಸುನಾಮಿ ಕಿಟ್ಟಿಯನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ನಿನ್ನೆ ಬಂಧನವಾಗಿದ್ದ ಕಿ್ಟ್ಟಿಯನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಕಿಟ್ಟಿ ಮತ್ತು ಗ್ಯಾಂಗ್ ಅನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos