ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ವಿದ್ವತ್ ಸಹೋದರ ಸಾತ್ವಿಕ್ ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದು, ತನ್ನ ಮೇಲೂ ನಲಪಾಡ್ ಗ್ಯಾಂಗ್ ಹಲ್ಲೆ ಮಾಡಿತು ಎಂದು ಹೇಳಿದ್ದಾರೆ.
ಇಂದು ಸಿಸಿಬಿ ಅಧಿಕಾರಿಗಳ ಬಳಿ ತೆರಳಿ ಹೇಳಿಕೆ ದಾಖಲು ಮಾಡಿದ ವಿದ್ವತ್ ಸಹೋದ ಸಾತ್ವಿಕ್, "ನನ್ನ ತಮ್ಮನ ಮೇಲೆ ಮಾತ್ರವಲ್ಲ ನನ್ನ ಮೇಲೂ ನಲಪಾಡ್ ಮತ್ತು ಆತನ ಗ್ಯಾಂಗ್ ಹಲ್ಲೆ ಮಾಡಿತ್ತು. ಹಲ್ಲೆ ವಿಚಾರ ತಿಳಿದ ನಾನು ನೇರವಾಗಿ ವಿದ್ವತ್ ಚಿಕಿತ್ಸೆಗೆ ದಾಖಲಾಗಿದ್ದ ಮಲ್ಯ ಆಸ್ಪತ್ರೆಗೆ ತೆರಳಿದ್ದೆ. ವಿದ್ವತ್ ನೋಡಲು ಆಸ್ಪತ್ರೆಗೆ ಬಂದಾಗ ಅಲ್ಲಿಗೂ ಆಗಮಿಸಿದ್ದ ನಲಪಾಡ್ ಗ್ಯಾಂಗ್ ನನ್ನ ಮೇಲೂ ಹಲ್ಲೆ ಮಾಡಿದರು ಎಂದು ಸಿಸಿಬಿ ಪೊಲೀಸರ ಮುಂದೆ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಸಾತ್ವಿಕ್ ಮಾಹಿತಿ ನೀಡಿದ್ದಾರೆ.
ವಿದ್ವತ್ ಮೇಲೆ ಹಲ್ಲೆ ನಡೆದ ಬಳಿಕ ಆತನ ಸ್ನೇಹಿತರು ಫೋನ್ ಮಾಡಿ ನನಗೆ ವಿಷಯ ತಿಳಿಸಿದ್ದರು. ನಾನು ಸ್ಥಳಕ್ಕೆ ಬರುವಷ್ಟರಲ್ಲಿ ವಿದ್ವತ್ ನನ್ನು ಮಲ್ಯ ಅಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಬಂದಾಗ ನಲಪಾಡ್ ಹಾಗೂ ಅವನ ಗ್ಯಾಂಗ್ ಇಲ್ಲಿಗೂ ಬಂದಿದ್ದರು. ಈ ವೇಳೆ ಅವರು ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಿದ್ದಾಗ ನನ್ನ ಮೇಲೂ ಕಿರುಚಾಡಿದ್ದರು. ಇದಕ್ಕೆ ನಾನು ಪ್ರತಿರೋಧ ತೋರಿದಾಗ ನನ್ನ ಮೇಲೆ ಕೈ ಮಾಡಿದರು ಎಂದು ಸಾತ್ವಿಕ್ ಹೇಳಿದ್ದಾರೆ.
ಇದೇ ಪ್ರಕರಣ ಸಂಬಂಧ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ನಿನ್ನೆಯಷ್ಟೇ ವಿದ್ವತ್ ಹೇಳಿಕೆ ಪಡೆದಿದ್ದ ತನಿಖಾಧಿಕಾರಿಗಳು ನಂತರ ಸಾತ್ವಿಕ್ ಹೇಳಿಕೆಯನ್ನು ಪಡೆದಿದ್ದು ಅದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos