ಬೆಂಗಳೂರು: ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಲಪಾಡ್ ಮೊಹಮದ್ ನಿಂದ ತೀವ್ರ ಹಲ್ಲೆಗೊಳಗಾಗಿದ್ದ ವಿದ್ವತ್ ಲೋಕನಾಥನ್ ಅವರನ್ನು ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ತೀವ್ರ ಹಲ್ಲೆಗೊಳಗಾಗಿದ್ದ ವಿದ್ವತ್ ಕಳೆದ 15 ದಿನಗಳಿಂದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಫೆಬ್ರವರಿ 17 ರಂದು ಹಲ್ಲೆಗೊಳಗಾಗಿದ್ದರು.
ಆಸ್ಪತ್ರೆಗೆ ತೆರಳಿದ್ದ ಸಿಸಿಬಿ ಪೊಲೀಸರು ವಿದ್ವತ್ ಸಹೋದರ ಸಾತ್ವಿಕ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಜೊತೆಗೆ ವಿದ್ವತ್ ಅವರ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ನನ್ನ ತಮ್ಮನ ಮೇಲೆ ಮಾತ್ರವಲ್ಲ ನನ್ನ ಮೇಲೂ ನಲಪಾಡ್ ಮತ್ತು ಆತನ ಗ್ಯಾಂಗ್ ಹಲ್ಲೆ ಮಾಡಿತ್ತು. ಹಲ್ಲೆ ವಿಚಾರ ತಿಳಿದ ನಾನು ನೇರವಾಗಿ ವಿದ್ವತ್ ಚಿಕಿತ್ಸೆಗೆ ದಾಖಲಾಗಿದ್ದ ಮಲ್ಯ ಆಸ್ಪತ್ರೆಗೆ ತೆರಳಿದ್ದೆ. ವಿದ್ವತ್ ನೋಡಲು ಆಸ್ಪತ್ರೆಗೆ ಬಂದಾಗ ಅಲ್ಲಿಗೂ ಆಗಮಿಸಿದ್ದ ನಲಪಾಡ್ ಗ್ಯಾಂಗ್ ನನ್ನ ಮೇಲೂ ಹಲ್ಲೆ ಮಾಡಿದರು ಎಂದು ಸಿಸಿಬಿ ಪೊಲೀಸರ ಮುಂದೆ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಸಾತ್ವಿಕ್ ಮಾಹಿತಿ ನೀಡಿದ್ದಾರೆ ಹೀಗಾಗಿ ಸಾತ್ವಿಕ್ ಅವರನ್ನು ಪ್ರತ್ಯಕ್ಷ ಸಾಕ್ಷಿ ಎಂದು ಪರಿಗಣಿಸಬಹುದು ಎನ್ನಲಾಗಿದೆ.
ಇನ್ನೂ ಅದೀನ ನ್ಯಾಯಾಲಯದಲ್ಲಿ ಮೊಹಮದ್ ಗೆ ಜಾಮೀನು ಸಿಗದ ಕಾರಣ ಇಂದು ಹೈಕೋರ್ಟ್ ಗೆ ಮೊರೆ ಹೋಗುವ ಸಾಧ್ಯತೆಯಿದೆ.