ಬೆಂಗಳೂರು: ಫರ್ಜಿ ಕೆಫೆಯಲ್ಲಿ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮತ್ತವನ ಗ್ಯಾಂಗ್ ನಿಂದ ಹಲ್ಲೆಗೊಳಗಾಗಿದ್ದ 24 ವರ್ಷದ ವಿದ್ವತ್ ಲೋಕನಾಥ್ ಸಿಸಿಬಿ ಪೊಲೀಸರ ಮುಂದೆ ಘಟನೆ ನಡೆದ ದಿನದ ವಿವರಗಳನ್ನು ನೀಡಿದ್ದಾರೆ.
ನನನ್ನು ನೋಡಲು ಬಂದಿದ್ದ ನನ್ನ ಸ್ನೇಹಿತರ ಜೊತೆ ಯುಬಿ ಸಿಟಿಯ ಫರ್ಜಿ ಕೆಫೆಗೆ ಊಟಕ್ಕೆ ತೆರಳಿದ್ದೆವು. ನನ್ನ ಕಾಲು ಮುರಿತಕ್ಕೊಳಗಾಗಿದ್ದ ಕಾರಣ ನಾನು ಕಾಲು ಚಾಚಿಕೊಂಡು ಕುಳಿತಿದ್ದೆ.
ಸುಮಾರು 10.15 ಕ್ಕೆ ಸುಮಾರು 15 ಜನವಿದ್ದ ತಂಡವೊಂದು ರೆಸ್ಟೋರೆಂಟ್ ಗೆ ಬಂದಿತ್ತು, ಅದರಲ್ಲಿ ಮೊಹಮದ್ ನಲಪಾಡ್ ಕೂಡ ಇದ್ದ, ಅವರು ತೆರಳುವಾಗ ನನ್ನ ಕಾಲು ನಲಪಾಡ್ನ ಸ್ನೇಹಿತನಿಗೆ ತಾಕಿತು. ಆ ಕೂಡಲೇ ನಾನು ಕ್ಷಮೆ ಕೋರಿದೆ. ಆತನ ಹೆಸರು ಅರುಣ್ ಬಾಬು,ನಾನು ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಆತ ನನ್ನನ್ನು ನಿಂದಿಸಿದ,ನಾನು ಮತ್ತೆ ಕ್ಷಮೆ ಕೋರಿದೆ. ಅಲ್ಲಿಂದ ತೆರಳಿ ಅವರು ಮತ್ತೊಂದು ಟೇಬಲ್ ನಲ್ಲಿ ಕುಳಿತರು, ಬಾಬು ಮತ್ತವನ ಜೊತೆಗಿದ್ದ ಕೆಲವರು ನನ್ನನ್ನು ಗುರಾಯಿಸುತ್ತಿದ್ದರು, ಇದು ನನ್ನ ಗಮನಕ್ಕೆ ಬಂದಿತು.
ಇದ್ದಕಿದ್ದಂತೆ ಎದ್ದು ಬಂದ ಅವರು ನನ್ನ ಮೇಲೆ ಹಲ್ಲೆ ಮಾಡಿದರು. ನನ್ನನ್ನು ರಕ್ಷಿಸಿಕೊಳ್ಳಲು ನಾನು ಅವನಿಗೆ ಹೊಡೆದೆ, ಇದಕ್ಕಾಗಿ ಕಾಯುತ್ತಿದ್ದ ಇಡೀ ತಂಡ ನನ್ನ ಮೇಲೆ ಹಲ್ಲೆ ನಡೆಸಿತು, ನಾನು ಮತ್ತು ನನ್ನ ಸ್ನೇಹಿತರು ನನ್ನನ್ನು ಬಿಟ್ಟು ಬಿಡುವಂತೆ ಅವರಲ್ಲಿ ಬೇಡಿಕೊಂಡೆವು. ಆದರೆ ಅವರು ಬಾಟಲ್ ಗಳಿಂದ ಹಾಗೂ ರೆಸ್ಟೋರೆಂಟ್ ನಲ್ಲಿದ್ದ ಕೆಲ ವಸ್ತುಗಳಿಂದ ನನ್ನನ್ನು ಥಳಿಸಿದರು, ಇದೇ ವೇಳೆ ನಾನು ಯಾರೆಂದು ನಿನದೆ ಗೊತ್ತಿದೆಯೆ ಎಂದು ಮೊಹಮದ್ ನಲಪಾಡ್ ಕೇಳಿದ, ಜೊತೆಗೆ ಆತನ ಸ್ನೇಹಿತರು ಕ್ಷಮೆ ಕೋರುವಂತೆ ನನಗೆ ಹೇಳಿದರು,
ಕ್ಷಮೆ ಕೇಳಿದ ಮೇಲೆಯೂ ಅವರು ನನ್ನ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದರು. ಹೋಟೆಲ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ನನ್ನನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆತಂದರು, ಅಲ್ಲಿಯೂ ನನ್ನ ಮೇಲೆ ಹಲ್ಲೆ ನಡೆಸಿದರು. ಹೇಗೋ ಸುದಾರಿಸಿಕೊಂಡ ನನ್ನ ಸ್ನೇಹಿತರು ನನ್ನನ್ನು ಮಲ್ಯ ಆಸ್ಪತ್ರೆಗೆ ಕರೆತಂದರು. 10 ನಿಮಿಷಗಳ ಬಳಿಕ ಅಲ್ಲಿಗೂ ಬಂದ ನಲಪಾಡ್ ಗ್ಯಾಂಗ್, ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿತು. ಅವರು ಅಲ್ಲಿಂದ ತೆರಳಿದ ನಂತರ ನನ್ನ ಉಳಿದ ಸ್ನೇಹಿತರು ಆಸ್ಪತ್ರೆಗೆ ಬಂದರು ಎಂದು ವಿದ್ವತ್ ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos