ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ
ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಕಚೇರಿಯಲ್ಲೇ ಅವರ ಮೇಲಿನ ದಾಳಿಗೆ ಭದ್ರತಾ ಲೋಪವೇ ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ.
ಲೋಕಾಯುಕ್ತರಿಗೆ ಚಾಕುವಿನಿಂದ ಇರಿದ ವ್ಯಕ್ತಿ ತೇಜರಾಜ್ ಶರ್ಮಾ ಎಂದು ಗುರುತಿಸಲಾಗಿದ್ದು, ಮೊದಲು ಲೋಕಾಯುಕ್ತರ ಕಚೇರಿಯಲ್ಲಿರುವ ರಿಜಿಸ್ಟರ್ ನಲ್ಲಿ ಸಹಿ ಮಾಡಿ, ಯಾವುದೇ ಅನುಮಾನ ಬಾರದಂತೆ ಚಾಕುವಿನೊಂದಿಗೆ ಲೋಕಾಯುಕ್ತರ ಕೊಠಡಿ ಪ್ರವೇಶಿಸಿದ್ದಾನೆ.
ಭಾರೀ ಭದ್ರತೆಯ ವಿಧಾನಸೌಧದ ಬಳಿಯೇ ಇರುವ ಲೋಕಾಯುಕ್ತ ಕಚೇರಿಗೆ ಇಂಡಿನ್ ಎಕ್ಸ್ ಪ್ರೆಸ್ ಪ್ರತಿನಿಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲೋಕಾಯುಕ್ತರ ಕಚೇರಿಯ ಪ್ರವೇಶ ದ್ವಾರದಲ್ಲಿರುವ ಮೆಟಲ್ ಡಿಟೆಕ್ಟರ್ ಕಾರ್ಯನಿರ್ವಹಿಸುತ್ತಿಲ್ಲ.
ಎರಡನೇಯದಾಗಿ ಅಲ್ಲಿ ಸಿಸಿಟಿವಿ ಇದೆ. ಆದರೆ ಮುಖ್ಯ ಕಚೇರಿ ಪ್ರವೇಶಿಸುವ ಮುನ್ನ ಯಾವುದೇ ಪೊಲೀಸರು ಅವರನ್ನು ಪ್ರಶ್ನಿಸುವುದಿಲ್ಲ ಮತ್ತು ತಪಾಸಣೆ ಸಹ ನಡೆಸಲ್ಲ. ಹೀಗಾಗಿ ಯಾರೂ ಬೇಕಾದರೂ ಸುಲಭವಾಗಿ ಲೋಕಾಯುಕ್ತರ ಕಚೇರಿ ಪ್ರವೇಶಿಸಬಹುದಾಗಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.
ಮೂರನೇಯದಾಗಿ, ಚಾಕು ಇರಿದ ಶರ್ಮಾ, ಮಧ್ಯಾಹ್ನದ ಊಟದ ಸಮಯದಲ್ಲಿ ಲೋಕಾಯುಕ್ತರ ಮುಖ್ಯ ಕಚೇರಿ ಪ್ರವೇಶಿಸಿದ್ದು, ಈ ವೇಳೆ ಸಿಬ್ಬಂದಿ ಸೇರಿದಂತೆ ಪೊಲೀಸರು ಊಟಕ್ಕೆ ತೆರಳಿದ್ದರು.
ಲೋಕಾಯುಕ್ತರ ಕೊಠಡಿಯ ಮುಂದೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಊಟಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಶರ್ಮಾ ಸಹಾಯಕರ ಬಳಿ ತನ್ನ ಹೆಸರು ಹೇಳಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಬಳಿಗೆ ತೆರಳಿದ್ದಾನೆ ಸ್ಥಳದಲ್ಲಿದ್ದ ಸಿಬ್ಬಂದಿಯೊದ್ದರು ತಿಳಿಸಿದ್ದಾರೆ.
ಚಾಕು ಇರಿತದಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಸದ್ಯ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos