ರಾಜ್ಯ

ಐಪಿಎಸ್ ಅಧಿಕಾರಿಗಳ ಸಂಘದಿಂದ ರತ್ನಪ್ರಭಾಗೆ ಪತ್ರ, ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

Srinivasamurthy VN
ಬೆಂಗಳೂರು: ತಮ್ಮ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಬೇಸತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಐಪಿಎಸ್ ಅಧಿಕಾರಿಗಳ ಸಂಘ ಬರೆದಿರುವ ಪತ್ರ ಇದೀಗ ರಾಜ್ಯ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದ್ದು, ಘಟನೆಯಿಂದ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ ಎಂದು ಹೇಳಲಾಗಿದೆ.
ರಾಜಕೀಯ ಹಸ್ತಕ್ಷೇಪಕ್ಕೆ ಬೇಸತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಐಪಿಎಸ್ ಅಧಿಕಾರಿಗಳ ಸಂಘದ ಹೆಸರಿನಲ್ಲಿ  ಬರೆದಿರುವ ಪತ್ರದಿಂದಾಗಿ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾದಂತೆ ಕಂಡುಬಂದಿದ್ದು, ಐಪಿಎಸ್ ಅಧಿಕಾರಿಗಳ ಸಂಘದ ಹೆಸರಿನಲ್ಲೇ ಬಂದಿರುವ ಈ ಪತ್ರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದು, ಇಂತಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ಎದುರಾಗುವ ಸಂದರ್ಭದಲ್ಲಿ ಇಂತಹದ್ದೊಂದು ಪತ್ರವನ್ನು ಐಪಿಎಸ್ ಅಧಿಕಾರಿಗಳ ಸಂಘ ಬರೆದಿರುವುದು ಸರ್ಕಾರಕ್ಕೆ ನುಂಗಲಾರದ ಬಿಸಿತುಪ್ಪದಂತಾಗಿದ್ದು, ರತ್ನಪ್ರಭಾ ಅವರಿಗೆ ಪತ್ರ ಬಂದ ಬೆನ್ನಲ್ಲೇ ನಿನ್ನೆ ರಾತ್ರಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರೊಂದಿಗೆ ಸಭೆ ನಡೆಸಿ, ಇಂತಹ ಪೊಲೀಸ್ ಅಧಿಕಾರಿಗಳ ಬಂಡಾಯವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಸಮಸ್ಯೆಗಳು ಏನೇ ಇರಬಹುದು, ಅದನ್ನು ನೇರವಾಗಿ ಗೃಹ ಸಚಿವರು ಇಲ್ಲವೆ ತಮ್ಮ ಗಮನಕ್ಕೆ ತರಬೇಕು. ಅಂತಹದ್ದರಲ್ಲಿ ಏಕಾಏಕಿ ಇಂತಹ ನಿರ್ಧಾರವನ್ನು ಕೈಗೊಂಡು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಅಧಿಕಾರಿಗಳ ವರ್ತನೆ ಸರಿಯಲ್ಲ. ಯಾರೇ ಆಗಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
SCROLL FOR NEXT