ಮಂಗಳೂರು: ಬಿಜೆಪಿ ವಿರುದ್ದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಬಿಜೆಪಿಯವರು ಕೌರವರು, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆಂದು ಮಂಗಳವಾರ ಹೇಳಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಜನಾಶೀರ್ವಾದ ಯಾತ್ರೆ ಕೈಗೊಂಡ ರಾಹುಲ್ ಗಾಂಧಿಯವರು ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗುರಿಯಾಗಿರಿಸಿಕೊಂಡು ಟೀಕೆಯ ಸುರಿಮಳೆಗೈದಿದ್ದಾರೆ.
ನಿನ್ನೆ ಸಂಜೆ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿರುವ ಅವರು, ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯನ್ನು ಕುರುಕ್ಷೇತ್ರ ಯುದ್ಧಕ್ಕೆ ಹೋಲಿಕೆ ಮಾಡಿದ್ದಾರೆ.
ಬಿಜೆಪಿ ಸುಳ್ಳು ಹೇಳಿಕೆಯ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಸತ್ಯ ಹೇಳಿ ಅಧಿಕಾರಕ್ಕೆ ಬರುತ್ತಿದೆ. ಕೌರವರಿಗೆ ಯುದ್ಧ ಗೆಲ್ಲಲು ಬೇಕಾದ ಎಲ್ಲಾ ತಂತ್ರಗಳೂ, ಸೈನ್ಯ ಬಲವೂ ಇತ್ತು. ಕೊನೆಗೆ ಪಾಂಡವರು ಸತ್ಯದ ಹಾದಿಯಲ್ಲಿ ಗೆದ್ದರು. ಬಿಜೆಪಿ ಅಧಿಕಾರಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗಲೂ ಸಿದ್ಧವಿದೆ. ಗೋವಾದಿಂದ ತೊಡಗಿ ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಮೇಘಾಲಯಗಳಲ್ಲಿ ಶಾಸಕರನ್ನು ಖರೀದಿಸುವ ಮೂಲಕ ಬಿಜೆಪಿ ಅಧಿಕಾರಕ್ಕಾಗಿ ಸುಳ್ಳಿನ ಹಾದಿಯನ್ನು ಹಿಡಿದಿದೆ ಎಂದು ನೇರವಾಗಿ ಆರೋಪ ಮಾಡಿದರು.
ಅಧಿಕಾರಕ್ಕೆ ಬಂದರೆ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ
ಮೀನುಗಾರಿಕಾ ಸಮುದಾಯದ ಮನಗೆಲ್ಲಲು ಇದೇ ವೇಳೆ ಯತ್ನ ನಡೆಸಿರುವ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ರಚನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೇ ಆದರೆ, ಮೀನುಗಾರರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚನೆ ಮಾಡುತ್ತೇನೆಂದು ತಿಳಿಸಿದ್ದಾರೆ.