ರಾಜ್ಯ

ಕರ್ನಾಟಕ ರಾಜ್ಯಸಭೆ ಚುನಾವಣೆಯಲ್ಲಿ ಮೋಸದಾಟ -ಜೆಡಿಎಸ್ ಅಳಲು

Nagaraja AB

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಮೋಸದಾಟ ನಡೆದಿದೆ ಎಂದು ಜೆಡಿಎಸ್  ಆರೋಪಿಸಿದೆ.

ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ,ಕಾಂಗ್ರೆಸ್ ಶಾಸಕರಿಬ್ಬರು ಅಡ್ಡ ಮತದಾನ ಮಾಡಿದ್ದರೂ ಅವರಿಗೆ ಎರಡನೇ ಬಾರಿ ಮತ ಚಲಾವಣೆಗೆ ಅವಕಾಶ ನೀಡುವ ಮೂಲಕ ಮೋಸ ಮಾಡಲಾಗಿದೆ ಎಂದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಮತಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲು ಬೇರೆಯವರೆಗೆ ಮತವನ್ನು ಹಾಕಿದ್ದಾರೆ. ಆದರೂ, ತಮ್ಮ ಪಕ್ಷದ ಪರ ಅಭ್ಯರ್ಥಿಗೆ ಮತ ನೀಡುವಂತೆ ಬೇರೆ ಮತ ಪತ್ರ ನೀಡಿ ಮತ ಚಲಾವಣೆಗೆ ಅವಕಾಶ ಮಾಡಿಕೊಡಲಾಯಿತು ಎಂದು ದೂರಿದರು.

 ಚುನಾವಣಾಧಿಕಾರಿಗಳು ಆಡಳಿತಾರೂಢ ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸಿದ್ದಾರೆ. ಅವರೇ ಎರಡನೇ ಬಾರಿಗೆ ಮತಪತ್ರ ತಂದುಕೊಡುವ ಮೂಲಕ ಕಾನೂನು ಬಾಹಿರವಾಗಿ ಮತದಾನ ನಡೆದಿದ್ದು, ಮರು ಮತದಾನ ನಡೆಸುವಂತೆ ಆಗ್ರಹಿಸಿದರು.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ  ಮೂವರು ಕಾಂಗ್ರೆಸ್ ಅಭ್ಯರ್ಥಿಗಳು , ಬಿಜೆಪಿ ಹಾಗೂ ಜೆಡಿಎಸ್ ನಿಂದ ತಲಾ ಒಬ್ಬರು ಅಭ್ಯರ್ಥಿಗಳು ಸೇರಿದಂತೆ ಐವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಎಐಸಿಸಿ ವಕ್ತಾರ ಸಯ್ಯದ್ ನಸೀರ್ ಹುಸೈನ್, ಎಲ್. ಹನುಮಂತಯ್ಯ, ಜಿ. ಸಿ. ಚಂದ್ರಶೇಖರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರೆ. ರಾಜೀವ್ ಚಂದ್ರಶೇಖರ್ ಎರಡನೇ ಬಾರಿಗೆ ಬಿಜೆಪಿಯಿಂದ , ಬಿ. ಎಂ. ಫಾರೂಖ್ ಜೆಡಿಎಸ್ ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.

SCROLL FOR NEXT