ಯುವತಿ ಅಪಹರಣಕ್ಕೆ ಯತ್ನಿಸಿದ ಅಪಹರಣಕಾರರ ಮೇಲೆ ಪೊಲೀಸರ ಗುಂಡಿನ ದಾಳಿ
ಬೆಂಗಳೂರು: ಯುವತಿಯೊಬ್ಬಳ ಅಪಹರಣ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಅಪಹರಣಕಾರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೊಡತಿ ಬಸ್ ಡಿಪೋ ಬಳಿ ಈ ಘಟನೆ ನಡೆದಿದ್ದು, ಭಾನುವಾರ ತಡರಾತ್ರಿ ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರು ಅಪಹರಣಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಆರೋಪಿಗಳಾದ ಸೆಲ್ವಕುಮಾರ್ ಮತ್ತು ಶಂಕರ್ ಎಂಬುವವರಿಗೆ ಗಾಯಗಳಾಗಿದೆ.
ಮೂಲಗಳ ಪ್ರಕಾರ ಯುವತಿ ಅಪಹರಣದ ಕುರಿತು ಮಾಹಿತಿ ಲಭ್ಯವಾದ ಕೂಡಲೇ ಅಲರ್ಟ್ ಆದ ಪೊಲೀಸರು, ಅಪಹರಣಕಾರರ ಕುರಿತು ಮಾಹಿತಿ ಕಲೆಹಾಕಿ, ಆರೋಪಿಗಳನ್ನು ಬಂಧಿಸಲು ಹೋದಾಗ ಆರೋಪಿಗಳು ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಇನ್ಸ್ಪೆಕ್ಟರ್ ಸೈಮನ್ ಹಾಗೂ ಎಸ್ಐ ಸೋಮಶೇಖರ್ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ದುಷ್ಕರ್ಮಿಗಳು ಪೇದೆ ಮಹಾಂತೇಶ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ.
ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಸೈಮನ್ ಹಾಗೂ ಎಸ್ಐ ಸೋಮಶೇಖರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗಲೂ ಆರೋಪಿಗಳು ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಆರೋಪಿಗಳಿಬ್ಬರು ಗಾಯಗೊಂಡಿದ್ದು, ಗಾಯಗೊಂಡ ಪೇದೆ ಮಹಾಂತೇಶ ಮತ್ತು ಆರೋಪಿಗಳಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ಮಾರ್ಚ್ 19 ರಂದು ಯುವತಿಯನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಬೆಳ್ಳಂದೂರು ಬಳಿಯಲ್ಲಿ ಸೆಲ್ವಕುಮಾರ್ ಮತ್ತು ಶಂಕರ್ ಸೇರಿ ನಾಲ್ಕೈದು ಆರೋಪಿಗಳಿಂದ ಕೃತ್ಯವೆಸಗಲಾಗಿತ್ತು. ಅಲ್ಲದೆ, ಘಟನೆ ಬಳಿಕ ಕಾರಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಆರೋಪಿಗಳು ಯತ್ನಿಸಿದ್ದರು. ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲೇ ಆರೋಪಿಗಳಿಂದ ಯುವತಿ ತಪ್ಪಿಸಿಕೊಂಡು ಬಂದಿದ್ದಳು. ಈ ಕುರಿತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos