ಬೆಂಗಳೂರು: ಅನಾರೋಗ್ಯದಿಂದ ಬಳುತ್ತಿದ್ದ ಮಗನ ಸಂಕಷ್ಟವನ್ನು ನೋಡಲಾಗದೆ ತೀವ್ರವಾಗಿ ನೊಂದ ಕೆಎಸ್ಆರ್'ಪಿ ಮುಖ್ಯ ಪೇದೆಯೊಬ್ಬರು, ತಮ್ಮ ಪುತ್ರನನ್ನು ಕೊಂದುಬಳಿಕ ತಾವು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಟನ್'ಪೇಟೆ ಮುಖ್ಯರಸ್ತೆಯ ವಸಂತ್ ರಾಜ್ ಪ್ಯಾರಾಡೈಸ್ ಲಾಡ್ಸ್'ನಲ್ಲಿ ನಡೆದಿದೆ.
ಮೈಸೂರಿನ ರಾಜ್ಯ ಸಶಸ್ತ್ರ ಮೀಸು ಪಡೆದ ಮುಖ್ಯ ಪೇದೆ ವಿಶ್ವನಾಥ್ (41) ಹಾಗೂ ಅವರ ಪುತ್ರ ಸಂವಿತ್ (4) ಮೃತ ದುರ್ದೈವಿಗಳಾಗಿದ್ದಾರೆ.
2 ದಿನಗಳ ಹಿಂದೆ ಮೈಸೂರಿನಿಂದ ನಗರಕ್ಕೆ ಬಂದು ವಿಶ್ವನಾಥ್, ಅಂದೇ ಲಾಡ್ಜ್ ನಲ್ಲಿ ಪುತ್ರನನ್ನು ಕೊಂದು ಬಳಿಕ ಕೇಬಲ್ ವೈರ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಠಡಿಯಲ್ಲಿ ಸೋಮವಾರ ದುರ್ವಾಸಣೆ ಬರುತ್ತಿದ್ದುದ್ದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ, ಕೂಡಲೇ ಕಾಟನ್ ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು, ವಿಶ್ವನಾಥ್ ತಂಗಿದ್ದ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
10 ವರ್ಷಗಳ ಹಿಂದೆ ವಿಶ್ವನಾಥ್ ಹಾಗೂ ದಿವ್ಯಾ ವಿವಾಹವಾಗಿದ್ದು, ಈ ದಂಪತಿಗೆ ಸಂವಿತ್ ಎಂಬ ಏಕೈಕ ಪುತ್ರನಿದ್ದ. ಮೈಸೂರಿನ ನೇತಾಜಿ ನಗರದಲ್ಲಿ ಕುಟುಂಬದ ಜೊತೆಗೆ ವಾಸವಾಗಿದ್ದ ಅವರು, ಮೈಸೂರಿನ ಕೆಎಸ್ಆರ್'ಪಿ ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತ ಸಂಚಿತ್'ಗೆ ಎರಡು ವರ್ಷದಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ರಮೇಣ ಆತನಿಗೆ ಮಾತನಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿತ್ತು. ಇತ್ತ ತಮ್ಮ ಪುತ್ರನಿಗೆ ಬೆಂಗಳೂರು, ಮೈಸೂರಿನಲ್ಲಿ ಹಲವು ತಜ್ಞ ವೈದ್ಯರಲ್ಲಿ ವಿಶ್ವನಾಥಅ ದಂಪತಿ ಚಿಕಿತ್ಸೆ ಕೊಡಿಸಿದ್ದರೂ, ದಿನ ಕಳೆದಂತೆ ಸಂವಿತ್ ಆರೋಗ್ಯ ವಿಷಮಯವಾಯಿತು. ಇದರಿಂದ ಅವರು ಖಿನ್ನತೆಗೊಳಗಾಗಿದ್ದರು ಎಂದು ಪೊಲೀಸರುಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ವಿಶ್ವನಾಥ್ ಅವರಿಗೆ ಬೆಂಗಳೂರಿಗೆ ವರ್ಗಾವಣೆ ಆಗಿತ್ತು. ಪುತ್ರನ ಅನಾರೋಗ್ಯದ ನೋವಿನಿಂದ ಖಿನ್ನತೆಗೆ ಒಳಗಾಗಿದ್ದ ವಿಶ್ವನಾಥ್ ಅವರು ಶನಿವಾರ ಬೆಳಿಗ್ಗೆ ಪಾರ್ಕ್'ಗೆ ಕರೆದೊಯ್ಯುವುದಾಗಿ ಹೇಳಿ ಮೈಸೂರಿನಿಂದ ಮಗನನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ.
ಬಳಿಕ ಕಾಟನ್ ಪೇಟೆಯ ಲಾಡ್ಜ್ ನಲ್ಲಿ ಕೊಠಡಿ ಪಡೆದುಕೊಂಡಿದ್ದಾರೆ. ಅಂದೇ ಮಗನಿಗೆ ವಿಷ ಹಾಕಿ ಕೊಂದು ನಂತರ ಅವರು ನೇಣು ಬಿಗಿದುಕೊಂಡಿದ್ದಾರೆ.
ಪತಿ ಹಾಗೂ ಪುತ್ರ ಹಲವು ಸಮಯವಾದರೂ ಬಾರದೆ ಇದ್ದುದ್ದರಿಂದ ಗಾಬರಿಗೊಂಡ ದಿವ್ಯಾ ಅವರು ದೂರು ದಾಖಲಿಸಿದ್ದಾರೆ. ಈ ವೇಳೆ ಹುಡುಕಾಟ ಆರಂಭಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾರೆ. ಪ್ರಾಥಮಿಕ ತನಿಖಾ ವರದಿಯಲ್ಲಿ, ಮನೆಯಿಂದ ಪುತ್ರನೊಂದಿಗೆ ಬಂದಿರುವ ವಿಶ್ವನಾಥ್ ಅವರು ತಮ್ಮ ಬೈಕ್ ನ್ನು ಬಸ್ ನಿಲ್ದಾಣದಲ್ಲಿಯೇ ಪಾರ್ಕ್ ಮಾಡಿದ್ದಾರೆ. ಬಳಿಕ ನಂಜನಗೂಡಿನಲ್ಲಿ ಲಾಡ್ಜ್ ನಲ್ಲಿ ರೂಮ್ ಪಡೆದುಕೊಳ್ಳಲು ಹೋಗಿದ್ದಾರೆ. ಆದರೆ, ಅಲ್ಲಿ ರೂಮ್ ದೊರೆಯದೇ ಹೋದ್ದರಿಂದ ಬೆಂಗಳೂರು ನಗರಕ್ಕೆ ಬಸ್ ಹತ್ತಿದ್ದಾರೆಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವ ವಿಶ್ವನಾಥ್ ಅವರು, ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಪತ್ನಿಗೆ ಕ್ಷಮೆಯಾಚಿಸಿದ್ದಾರೆ. ನನ್ನ ಪುತ್ರ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದು, ಪುತ್ರನನ್ನು ಶಾಲೆಗೆ ಸೇರಿಸಲು ಹಲವು ಶಾಲೆಗಳನ್ನು ಸಂಪರ್ಕಿಸಿದ್ದೆ. ಆದರೆ. ಯಾವುದೇ ಶಾಲಾ ಆಡಳಿತ ಮಂಡಳಿ ಇದಕ್ಕೆ ಒಪ್ಪಿರಲಿಲ್ಲ. ಪುತ್ರನೊಂದಿಗೆ ಎರಡು ದಿನ ಕಳೆಯುವುದೂ ಕೂಡ ಕಷ್ಟಕರವಾಗಿತ್ತು. ಇನ್ನು ಹಲವು ದಿನಗಳ ಕಾಲ ಆತನನ್ನು ನೋಡಿಕೊಳ್ಳುವುದಾದರೂ ಹೇಗೆ? ಎಂದು ಪತ್ರದಲ್ಲಿ ಪತ್ನಿಯನ್ನು ಪ್ರಶ್ನಿಸಿದ್ದಾರೆ.