ಬೆಂಗಳೂರು ಕರಗ (ಸಂಗ್ರಹ ಚಿತ್ರ)
ಬೆಂಗಳೂರು: ನಗರದ ಜನತೆ ಬಹು ಕುತೂಹಲದಿಂದ ಕಾಯುತ್ತಿರುವ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮಧ್ಯರಾತ್ರಿ ಅದ್ಧೂರಿ ಶಕ್ತ್ಯೋತ್ಸವ ಹಾಗೂ ಮಹಾರಥೋತ್ಸವ ನಡೆಯಲಿದೆ.
ಆದಿ ಶಕ್ತಿ ಸ್ವರೂಪಿಣಿ ದ್ರೌಪದಿಯ ಆರಾಧನೆಯ ಪ್ರತೀಕವಾಗಿ ನಡೆಯುತ್ತಿರುವ ಕರಗ ಉತ್ಸವದಲ್ಲಿ ಶಕ್ತ್ಯೋತ್ಸವ ವಿಶೇಷವಾದುದು. ವಿಳಂಬಿ ನಾಮ ಸಂವತ್ಸರದ ಪಾಲ್ಗುಣ ಚೈತ್ರ ಷಷ್ಠಿಯಂದು (ಮಾ.31) ನಡೆಯುವ ಕರಗ ಉತ್ಸವದಲ್ಲಿಈ ಉತ್ಸವದ ಕಡೆ ಲಕ್ಷಾಂತರ ಭಕ್ತರ ದೃಷ್ಟಿ ನೆಟ್ಟಿದೆ.
ತಿಗಳರ ಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಮಹಾರಥೋತ್ಸವ ಮತ್ತು ಮುತ್ಯಾಲಮ್ಮ ದೇವಿಯ ಉತ್ಸವ ಪ್ರಯುಕ್ತ ದೇವಸ್ಥಾನದಲ್ಲಿವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಮಧ್ಯರಾತ್ರಿ 12ಕ್ಕೆ ದೇವಾಲಯದಿಂದ ಶ್ರೀ ದ್ರೌಪದಿದೇವಿ ಕರಗ ಶಕ್ತ್ಯೋತ್ಸವ ಆರಂಭವಾಗಲಿದೆ. ಈ ಬಾರಿ ಕರಗ ಉತ್ಸವ ನಡೆಸಿಕೊಡುವ ಅದೃಷ್ಟ 26 ವರ್ಷದ ಅರ್ಚಕ ಎನ್.ಮನು ಅವರಿಗೆ ಒಲಿದು ಬಂದಿದ್ದು , ಇದೇ ಮೊದಲ ಬಾರಿಗೆ ಕರಗ ಶಕ್ತ್ಯೋತ್ಸವ ನಡೆಸಿಕೊಡಲಿದ್ದಾರೆ.
ಕರಗ ಹೊರುವ ಇವರು, ಒಂಬತ್ತು ದಿನಗಳ ಕಾಲ ಸಾಕ್ಷಾತ್ ದೈವಾಂಶ ಸಂಭೂತರಾಗಿರುತ್ತಾರೆ. ಈ ವೇಳೆ ಬಹಳ ನಿಯಮ ನಿಷ್ಠೆಯಿಂದ ಇರಬೇಕು. ಅದಕ್ಕಾಗಿ ಮೂರು ತಿಂಗಳು ಮುಂಚಿತವಾಗಿಯೇ ದೇವಾಲಯ ಸೇರುತ್ತಾರೆ. ಮಾತ್ರವಲ್ಲ , ಕರಗ ಹೊರುವ ಅರ್ಚಕರು ಆರೋಗ್ಯವಂತರೂ ದೃಢಕಾಯರೂ ಆಗಿರಬೇಕು. ಈ ನಿಟ್ಟಿನಲ್ಲಿಅವರು ಗರಡಿ ಮನೆಯಲ್ಲಿಕಸರತ್ತನ್ನೂ ಸಹ ನಡೆಸಬೇಕಾಗುತ್ತದೆ.
ಮಧ್ಯರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಬಿಜಯ ಮಾಡಿಸಿ ಹಲಸೂರುಪೇಟೆಯ ದೇವಾಲಯಗಳಲ್ಲಿಪೂಜೆ ಸ್ವೀಕರಿಸಿ, ನಗರ್ತಪೇಟೆ ಮಾರ್ಗವಾಗಿ ನಿಗದಿಪಡಿಸಿದ ಪ್ರದೇಶಗಳನ್ನು ಸುತ್ತಿ, ಕುಲಪುರೋಹಿತರ ಮನೆಯಲ್ಲಿಪೂಜೆ ಸ್ವೀಕರಿಸಿ ಸೂರ್ಯೋದಯದ ವೇಳೆಗೆ ಕರಗವು ದೇವಾಲಯ ಸೇರಲಿದೆ.