ಮಂಡ್ಯ: ಕೆಆರ್ಎಸ್ ಜಲಾಶಯದ ಬೃಂದಾವನ ಗಾರ್ಡನ್ನಲ್ಲಿ ಬಿರುಗಾಳಿ ಮಳೆಗೆ ಮರವೊಂದು ಉರುಳಿಬಿದ್ದ ಪರಿಣಾಮ ಮೂವರು ಪ್ರವಾಸಿಗರು ಮೃತಪಟ್ಟಿದ್ದು ಏಳು ಮಂದಜಿ ಗಾಯಗೊಂಡಿದ್ದಾರೆ.
ಕೇರಳದ ವಿನೋದ್ (32), ಹಿಲರಿ(34) ಹಾಗೂ ರಾಮನಗರ ಸಮೀಪದ ರಾಜಶೇಖರ್ (35) ಮೃತಪಟ್ಟವರು. ಬೃಂದಾವನ ಗಾರ್ಡನ್ನಲ್ಲಿ ಬಿರುಗಾಳಿ ಸಹಿತ ಮಳೆ ಬಂದಾಗ ಪ್ರವಾಸಿಗರು ರಕ್ಷಿಸಿಕೊಳ್ಳಲು ಬೋಟಿಂಗ್ ಕೇಂದ್ರದ ಬಳಿ ಇದ್ದ ಮರದ ಕೆಳಗೆ ಬಂದಿದ್ದಾರೆ. ಗಾಳಿಯ ರಭಸಕ್ಕೆ ಮರ ಉರುಳಿ ಬಿದ್ದಿದೆ. 7 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿನೋದ್ ಮತ್ತು ಹಿಲರಿ ಸ್ಥಳದಲ್ಲಿಯೇ ಸಾವನ್ನಪ್ಪಿದರೇ ರಾಜಶೇಖರ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜಶೇಖರ ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದು ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರ ಬಿದ್ದ ನಂತರ ಬೃಂದಾವನ ಉದ್ಯಾನದಲ್ಲಿ ವಿದ್ಯುತ್ ಸ್ಥಗಿತಗೊಂಡು ಕಗ್ಗತ್ತಲು ಕವಿದಿತ್ತು. ಘಟನೆ ನಂತರ ಗೊಂದಲಕ್ಕೀಡಾಗಿದ್ದ ಪ್ರವಾಸಿಗರನ್ನು ಹೊರಕ್ಕೆ ಕಳುಹಿಸಲಾಯಿತು. ಕೆಆರ್ ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.