ರಾಜ್ಯ

ಕನ್ನಡ ಅಭಿಮಾನಿ ಬಸ್ ನಿರ್ವಾಹಕ: 12 ವರ್ಷಗಳ ಸೇವೆಯಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತಾಡಿಲ್ಲ!

Srinivas Rao BV
ನವೆಂಬರ್ 1, ಪ್ರತಿದಿನವಲ್ಲದೇ ಇದ್ದರೂ ಇದೊಂದು ದಿನ ಮಾತ್ರ ಎಲ್ಲರಿಗೂ ಕನ್ನಡದ ಮೇಲೆ ಅಭಿಮಾನ ಉಕ್ಕಿ ಹರಿಯುತ್ತದೆ. ಇಲ್ಲೊಬ್ಬ ಕನ್ನಡದ ಪ್ರೇಮಿ ಬಸ್ ನಿರ್ವಾಹಕ 12 ವರ್ಷಗಳ ಸೇವೆಯಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಅದರಲ್ಲಿಯೂ ಇಂಗ್ಲಿಶ್ ಭಾಷೆಯ ಒಂದೇ ಒಂದೂ ಪದವನ್ನೂ ಬಳಕೆ ಮಾಡಿಲ್ಲ! 
ಹುಬ್ಬಳ್ಳಿ ವಿಭಾಗದ ವಾಯುವ್ಯ ಕರ್ನಾಟಕ ಸಾರಿಗೆ(ಎನ್ ಡಬ್ಲ್ಯೂಕೆ ಆರ್ ಟಿಸಿ)ಯಲ್ಲಿ ನಿರ್ವಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಶಿವಯೋಗಿಮಠ,  ದಶಕಗಳಿಂದ ಕನ್ನಡ ಭಾಷೆಯನ್ನು ಮಾತ್ರ ಮಾತನಾಡುವುದನ್ನು ಪಾಲನೆ ಮಾಡಿಕೊಂಡುಬಂದಿದ್ದಾರೆ. ಟಿಕೆಟ್ ನೀಡಬೇಕಾದರೂ ಸಹ ಇಂಗ್ಲೀಶ್ ಪದ ಬಳಕೆ ಮಾಡದೇ ಚೀಟೀ ತೊಗೋರಿ ಎಂದೇ ಹೇಳುವುದು ವಿಶೇಷ. ಕನ್ನಡ ಅಭಿಮಾನದಿಂದಲೇ ಜನಪ್ರಿಯತೆ ಗಳಿಸಿರುವ ನಿರ್ವಾಹಕರಾಗಿದ್ದಾರೆ ಪ್ರಕಾಶ್ ಶಿವಯೋಗಿಮಠ. 
ಬಸ್ ನ ನಿರ್ವಾಹಕ ದಿನ ನಿತ್ಯ ಬಳಸುವ ಯಾವುದೇ ಪದವಾಗಿದ್ದರೂ ಅದನ್ನು ಶಿವಯೋಗಿಮಠ ಮಾತ್ರ ಕನ್ನಡದಲ್ಲೇ ಬಳಕೆ ಮಾಡುತ್ತಾರೆ. ಟಿಕೆಟ್ ಗೆ ಚೀಟಿ, ಬಸ್ ಸ್ಟಾಪ್ ಗೆ ನಿಲ್ದಾಣ, ಬಸ್ ಗೆ ವಾಹನ, ಬಸ್ ಡಿಪೋಗೆ ವಾಹನ ಘಟಕ ಎನ್ನುವ ಇವರ ಶುದ್ಧ ಕನ್ನಡವನ್ನು ಕೇಳಿ ಪ್ರಯಾಣಿಕರು ಗೊಂದಲಕ್ಕೀಡಾಗಿರುವ ಉದಾಹರಣೆಗಳೂ ಇವೆ. 
ಮುದ್ದೆಬಿಹಾಳದ ಕವಡಿಮಠ ಗ್ರಾಮದಲ್ಲಿ ಜನಿಸಿದ ಶಿವಯೋಗಿ ಮಠ, 2006 ರಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ನಿರ್ವಾಹಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಆಗಿನಿಂದಲೂ ಇವರ ಕನ್ನಡ ಪ್ರೀತಿ ಇದೇ ರೀತಿ ಮುಂದುವರೆದಿದೆ. ಉತ್ತರ ಕರ್ನಾಟಕದವರಾದರೂ ಇವರು ಬಳಕೆ ಮಾಡುವ ಶುದ್ಧ ಕನ್ನಡವನ್ನು ಕೇಳಿ ಕೆಲವು ಪ್ರಯಾಣಿಕರು ನೀವು ಉಡುಪಿ ಅಥವಾ ಮಂಗಳೂರಿನವರಾ? ಎಂದು ಕೇಳಿರುವುದೂ ಉಂಟು, ಆದರೆ ತಾನು ವಿಜಯಪುರದವನೆಂದು ಹೇಳುವ ಶಿವಯೋಗಿಮಠ ಅವರ ಉತ್ತರಕ್ಕೆ ಪ್ರಯಾಣಿಕರ ಅಚ್ಚರಿಯಷ್ಟೇ ಪ್ರತಿಕ್ರಿಯೆಯಾಗಿರುತ್ತದೆ. 
"ಧಾರವಾಡದಲ್ಲಿ 10 ನೇ ತರಗತಿ ವ್ಯಾಸಂಗ ಮಾಡಿದೆ. ಆದರೆ ನನ್ನ ತಂದೆ ಹುಬ್ಬಳ್ಳಿಯಲ್ಲಿ ನೆಲೆಸಿದರು. ನಾನು ವೃತ್ತಿ ಜೀವನ ಪ್ರಾರಂಭಿಸಿದಾಗಿನಿಂದಲೂ ಕನ್ನಡದಲ್ಲಿ ಮಾತ್ರ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡೆ, ದಿನ ನಿತ್ಯ ಕನ್ನಡವನ್ನು ಮಾತನಾಡುವುದು ಯಾರೂ ಹೇರಿದರೆ ಬರುವಂಥದ್ದಲ್ಲ, ಹೃದಯದಲ್ಲಿನ ಅಭಿಮಾನದಿಂದ ಬರುವಂಥದ್ದು ನಾನು ಮನೆಯಲ್ಲಿಯೂ ಇದೇ ರೀತಿ ಮಾತನಾಡುತ್ತೇನೆ" ಎನ್ನುವ ಶಿವಯೋಗಿಮಠ ವಿವಾಹವಾಗಿರುವುದು ಓರ್ವ ಶಾಲಾ ಶಿಕ್ಷಕಿಯನ್ನು.  
SCROLL FOR NEXT