ಬೆಂಗಳೂರು: 2015ರ ಕಡ್ಡಾಯ ಕನ್ನಡ ಭಾಷೆ ಕಲಿಕೆ ಕಾಯ್ದೆ ಪಾಲಿಸಬೇಕೆಂದು ಗುರುವಾರ, ನವೆಂಬರ್ ಒಂದರಿಂದ ಒಂದು ತಿಂಗಳ ಸಮಯವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಎಲ್ಲಾ ಶಾಲೆಗಳಿಗೆ ನೀಡಿದೆ.
ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ನಿನ್ನೆ ವಿಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ, ಕಾಯ್ದೆಯನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ರಾಜ್ಯದ ಎಲ್ಲಾ ಶಾಲೆಗಳು ನವೆಂಬರ್ ಕೊನೆಯ ಹೊತ್ತಿಗೆ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ನೊಟೀಸ್ ಕಳುಹಿಸಿದ ನಂತರವೂ ತಿದ್ದಿಕೊಂಡು ನಡೆಯದ ಶಾಲೆಗಳನ್ನು ಕೈಬಿಡುವಂತೆ ಕಾಯ್ದೆಯಲ್ಲಿ ಸಾಧ್ಯತೆಯಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು ಎರಡನೇ ಅವಕಾಶ ನೀಡಿ ಆದೇಶ ಅನುಸರಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಕಾಯ್ದೆಯನ್ನು ಬೆಂಗಳೂರಿನ 50ಕ್ಕೂ ಹೆಚ್ಚು ಶಾಲೆಗಳು ಉಲ್ಲಂಘಿಸುತ್ತಿವೆ ಎಂದು ಇತ್ತೀಚೆಗೆ ವರದಿಗಳು ಬಂದ ಹಿನ್ನಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ನ್ನು ಆಯೋಜಿಸಲಾಗಿತ್ತು. ಶಾಲೆ ನಡೆಸಲು ಆಡಳಿತ ಮಂಡಳಿ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತದೆ. ಹಾಗಾದರೆ ಈ ರಾಜ್ಯದ ಕಾನೂನನ್ನು ಏಕೆ ಪಾಲಿಸುವುದಿಲ್ಲ ಎಂದು ಕೇಳಿದರು.
ಈ ಮಧ್ಯೆ ಕಾಯ್ದೆಯನ್ನು ಪಾಲಿಸುತ್ತಿವೆಯೇ ಇಲ್ಲವೇ ಎಂದು ನೋಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಶಾಲೆಗಳಿಗೆ ನವೆಂಬರ್ ತಿಂಗಳಲ್ಲಿ ಅಚ್ಚರಿಯ ಭೇಟಿ ನೀಡಲು ನಿರ್ಧರಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಶಾಲೆಗಳಿಗೆ ಭೇಟಿ ನೀಡುತ್ತೇನೆ. ಅಲ್ಲಿ ಕಾಯ್ದೆಯನ್ನು ಉಲ್ಲಂಘಿಸುವು, ತಪ್ಪು ವರದಿ ಸಲ್ಲಿಸುವುದು ಕಂಡುಬಂದರೆ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲು ಪ್ರಧಾನ ಕಾರ್ಯದರ್ಶಿಗೆ ಸೂಚಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಎನ್ಒಸಿ(ಆಕ್ಷೇಪಣೆ ಇಲ್ಲ ಎಂದು ಪ್ರಮಾಣಪತ್ರ) ಅನುಮತಿ ನೀಡುವ ಪ್ರಾಧಿಕಾರವಾಗಿದ್ದು ಕಾಯ್ದೆ ಉಲ್ಲಂಘಿಸುತ್ತಿರುವುದು ಕಂಡುಬಂದರೆ ಎನ್ಒಸಿಯನ್ನು ಹಿಂತೆಗೆದುಕೊಳ್ಳಬಹುದು ಮತ್ತು ಶಾಲೆಗೆ ನೀಡಿದ ಅನುಮತಿಯನ್ನು ಹಿಂತೆಗೆದುಕೊಳ್ಳಬಹುದಾಗಿದೆ.
ಕಡ್ಡಾಯ ಕನ್ನಡ: 2018-19ನೇ ಶೈಕ್ಷಣಿಕ ವರ್ಷದಿಂದ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಮೊದಲ ಅಥವಾ ಎರಡನೇ ಭಾಷೆಯಾಗಿ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರ ಕಡ್ಡಾಯ ಮಾಡಿದೆ.
ಕಾಯ್ದೆ ಏನು ಹೇಳುತ್ತದೆ?: 2015ರ ಕಡ್ಡಾಯ ಕನ್ನಡ ಕಲಿಕೆ ಕಾಯ್ದೆಯ ಪ್ರಕಾರ, ಕಾಯ್ದೆಯನ್ನು ಉಲ್ಲಂಘಿಸಿದ ಶಾಲೆಗಳಿಗೆ ಮೊದಲ ಸಲ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಸಲವೂ ಉಲ್ಲಂಘಿಸಿದರೆ ಪ್ರತಿ ದಿನಕ್ಕೆ 100 ರೂಪಾಯಿಯಂತೆ ದಂಡ ವಿಧಿಸಲಾಗುತ್ತದೆ. ಎರಡನೇ ಸಲವೂ ಕಾಯ್ದೆಯನ್ನು ಪಾಲಿಸದಿದ್ದರೆ ಆ ಶಾಲೆಗಳಿಗೆ ನೀಡಿದ ಅನುಮತಿಯನ್ನು ತೆಗೆದುಹಾಕಲಾಗುತ್ತದೆ.