ಬೆಂಗಳೂರು: 1994 ರ ಇಸ್ರೋ ಗುಪ್ತಚರ ಪ್ರಕರಣದಲ್ಲಿ ತಪ್ಪಾಗಿ ಆರೋಪಿಸಲ್ಪಟ್ಟ ಕಾರ್ಮಿಕ ಗುತ್ತಿಗೆದಾರ' ಸುಧೀರ್ ಕುಮಾರ್ ಶರ್ಮಾ ಗುರುವಾರ ಬೆಂಗಳೂರಿನಲ್ಲಿ ನಿಧನರಾದರು. ಕ್ಯಾನ್ಸರ್ ನಿಂದಾಗಿ ಅವರು ಸಾವನ್ನಪ್ಪಿದ್ದು ಮೃತರು ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಶರ್ಮಾ ಅವರು ತಮ್ಮ ಮೇಲೆ ನಿರಾಧಾರ ಆರೋಪ ಹೊರಿಸಲಾಗಿದೆ ಎಂದು ವಾದಿಸಿದ್ದರಲ್ಲದೆ 55 ಲಕ್ಷ ರೂ. ಪರಿಹಾರಕ್ಕಾಗಿ ಮೊರೆ ಇಟ್ಟಿದ್ದರು. ಇತ್ತೀಚೆಗೆ ಕೇರಳದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ಸುಪ್ರೀಂ ಕೋರ್ಟ್ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಘೋಷಿಸಿದ್ದ ಬಳಿಕ ಶರ್ಮಾ ಅವರಿಗೆ ಸಹ ಶೀಘ್ರದಲ್ಲೇ ನಿರಪರಾಧಿ ಎನ್ನುವ ಮೂಲಕ ಪರಿಹಾರ ಸಿಗಲಿದೆ ಎನ್ನುವ ಭರವಸೆ ಇತ್ತು.
62 ವರ್ಷದ ಶರ್ಮಾ ತಾವು ನಿರ್ದೋಷಿ ಎಂದು ಹೇಳುತ್ತಿದ್ದು ತಮ್ಮನ್ನು ದುಷ್ಕರ್ಮಿ ಎಂದಿದ್ದವರ ಪ್ರತಿಭಟಿಸಿ ಕಾನೂನು ಹೋರಾಟ ನಡೆಸಿದ್ದರು.
ಇತ್ತೀಚೆಗೆ ಮಾದ್ಯಮಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಶರ್ಮಾ "ತಮಗೆ ಶ್ವಾಸಕೋಶದ ಕ್ಯಾನಸರ್ ಇದ್ದು ಇದಾಗಲೇ ನಾಲ್ಕನೇ ಹಂತಕ್ಕೆ ತಲುಪಿದೆ. ನಾನು ದಿನಗಳನ್ನು ಎಣಿಸುವ ಸ್ಥಿತಿಯಲ್ಲಿದ್ದೇನೆ. ಆದರೆ ನಾನು ಸಾಯುವ ಮುನ್ನ ದೇಶದ್ರೋಹಿ ಎನ್ನುವ ಪಟ್ಟದಿಮ್ದ ದೂರವಾಗಬೇಕು ಎಂದು ಬಯಸಿದ್ದರು. "ತಾವು ಮುಗ್ದರು" ಎಂದು ಅವರು ಒತ್ತಿ ಹೇಳಿದ್ದು ತಮ್ಮ ಕುಟುಂಬದವರಿಗೆ ಈ ಕಳಂಕ ಹತ್ತಿಕೊಳ್ಳುವುದು ತನಗಿಷ್ಟವಿಲ್ಲ ಎಂದು ನುಡಿದಿದ್ದರು.