ಗೋಣಿಕೊಪ್ಪ(ಮಡಿಕೇರಿ): ಟಿಪ್ಪು ಜಯಂತಿ ವಿರೋಧಿಸುವ ನೆಪದಲ್ಲಿ ಧರ್ಮ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಪತ್ರಕರ್ತ, ಪ್ರಸಿದ್ದ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಗೋಣಿಕೊಪ್ಪ ಪೋಲೀಸರು ಬಂಧಿಸಿದ್ದಾರೆ.
ಸಂತೋಷ್ ತಮ್ಮಯ್ಯ ವಿಚಾರಣೆ ನಡೆಸಿದ ಪೋಲೀಸರು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನವೆಂಬರ್ 5ರಂದು ಗೋಣೆಕೊಪ್ಪದ ಪ್ರಜ್ಞಾ ಕಾವೇರಿ ಸಂಘಟನೆ ಆಯೋಜಿಸಿದ್ದ "ಟಿಪ್ಪು ಕರಾಳ ಮುಖಗಳ ಅನಾವರಣ" ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ತಮ್ಮಯ್ಯ ಧರ್ಮವೊಂದರ ಕುರಿತು ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮಯ್ಯ ಸಮಾಜದ ಶಾಂತಿ ಕದಡುವ ಯತ್ನ ನಡೆಸಿದ್ದಾರೆ ಎಂದು ಸಿದ್ದಾಪುರ ಕರಡಿಗೋಡು ಗ್ರಾಮ ನಿವಾಸಿ ಕೆ.ಜಿ. ಅನ್ವರ್ ದೂರು ನೀಡಿದ್ದರು. ದೂರಿನ ಹಿನ್ನೆಲೆ ಮಂಗಳವಾರ ಮುಂಜಾನೆ ಸಂತೋಷ್ ತಮ್ಮಯ್ಯ ಬಂಧನವಾಗಿದೆ.
ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಗೋಣಿಕೊಪ್ಪದಲ್ಲಿ ಹಿಂದೂಪರ ಕಾರ್ಯಕರ್ತರು ಸೇರಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ.