ಕೊಡಗು: ಟಿಪ್ಪು ಜಯಂತಿ ವಿರೋಧಿಸುವ ಕಾರ್ಯಕ್ರಮದಲ್ಲಿ ಭಯೋತ್ಪಾದನೆಯ ಮನಸ್ಥಿತಿಯನ್ನು ಟೀಕಿಸಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣ ದಾಖಲಿಸಿ ಬಂಧಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿರುವ ಸಂತೋಶ್ ತಮ್ಮಯ್ಯ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ರಾಜ್ಯದ ಹಲವು ಸಂಘಟನೆಗಳು ಒತ್ತಾಯಿಸುತ್ತಿದ್ದು, ಸಂತೋಶ್ ತಮ್ಮಯ್ಯ ಬಂಧನವನ್ನು ವಿರೋಧಿಸಿ ನ.14 ರಂದು 1 ಗಂಟೆಗಳ ಕಾಲ ಕೊಡಗು ಬಂದ್ ಗೆ ಕರೆ ನೀಡಲಾಗಿದೆ.
ಟಿಪ್ಪು ಜಯಂತಿ ವಿರೋಧಿಸುವ ಕಾರ್ಯಕ್ರಮದಲ್ಲಿ ಸಂತೋಷ್ ತಮ್ಮಯ್ಯ ಅವರು ಟಿಪ್ಪುವಿನ ಕ್ರೌರ್ಯಕ್ಕೆ ಪ್ರೇರಣೆಯಾದ ಅಂಶಗಳ ಬಗ್ಗೆ ಮಾತನಾಡಿದ್ದರು. ಟಿಪ್ಪುವಿನ ಮಾನಸಿಕತೆ ಸಂಬಂಧ ಆತ ಯಾವುದರಿಂದ ಸ್ಪೂರ್ತಿ ಪಡೆದಿದ್ದ ಎಂದು ವಿಮರ್ಶಿಸಿದ್ದರು. ಈ ವೇಳೆ ಮಧ್ಯಪ್ರಾಚ್ಯದಲ್ಲಿನ ಮನಸ್ಥಿತಿಯ ಬಗ್ಗೆಯೂ ಉಲ್ಲೇಖಿಸಿದ್ದ ಸಂತೋಷ್ ತಮ್ಮಯ್ಯ ಅವರ ವಿರುದ್ಧ ಕಾನೂನು ದುರುಪಯೋಗಪಡಿಸಿಕೊಂಡು ಬಂಧಿಸಲಾಗಿದೆ, ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ವೇದಿಕೆಯಲ್ಲಿ ಇದ್ದ ಕಾರಣಕ್ಕೆ ನಮ್ಮ ಮೇಲೂ ಕೇಸು ದಾಖಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ರಾಬರ್ಟ್ ರೊಜಾರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.