ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಪ್ರತೀನಿತ್ಯ 40 ಸಾವಿರ ಮಕ್ಕಳಿಗೆ ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಾಡುವ ಅಡುಗೆ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಅದಮ್ಯ ಚೇತನ ಫೌಂಡೇಶನ್ ಸಿಬ್ಬಂದಿ ಹೇಳಿದ್ದಾರೆ.
ಅನಂತ್ ಕುಮಾರ್ ವಿಧಿವಶರಾದ ಸುದ್ದಿ ಬೆಳಿಗ್ಗೆ 4 ಗಂಟೆಗೆ ಬಂದಿತ್ತು. ಈ ವೇಳೆ ಮಕ್ಕಳಿಗೆ ಆಹಾರವನ್ನು ಸಿದ್ಧಪಡಿಸಲಾಗುತ್ತಿತ್ತು. ಸುದ್ದಿಯನ್ನು ಎಲ್ಲರಿಗೂ ಶೀಘ್ರಗತಿಯಲ್ಲಿ ತಲುಪಿಸಲು ಅಸಾಧ್ಯವಾಗಿತ್ತು. ನಮಗೆ ನಿಧನ ಸುದ್ದಿ ಬಂದಾಗ ರಾಜ್ಯ ಸರ್ಕಾರ ಆಗಾಗಲೇ ಶಾಲೆಗಳಿಗೆ ರಜೆ ಘೋಷಣೆ ಮಾಡಿತ್ತು. ಈ ವೇಳೆ ಅಡುಗೆಯ ಸಾಕಷ್ಟು ಕಾರ್ಯಗಳು ಮುಕ್ತಾಯಗೊಂಡಿದ್ದರು. ಸಂಸದ್ ಗ್ರಾಮ ಯೋಜನೆ ಅಡಿಯಲ್ಲಿ ಅನಂತ್ ಕುಮಾರ್ ಅವರು ದತ್ತು ಪಡೆದುಕೊಂಡಿದ್ದ ರಾಗಿ ಹಳ್ಳಿ, ಸ್ಲಂಗಳಿಗೂ ಆಹಾರವನ್ನು ಕಳುಹಿಸಲಾಗಿತ್ತು ಎಂದು ಸಿಬ್ಬಂದಿಗಳು ಹೇಳಿದ್ದಾರೆ.
ಮುಂದಿನ ದಿನ ಅಡುಗೆ ಮಾಡಲು ನಾವು ಹಿಂದಿನ ಸಂಜೆಯೇ ಸಿದ್ಧತೆಗಳನ್ನು ನಡೆಸುತ್ತಿರುತ್ತೇವೆ. ಅನಂತ್ ಕುಮಾರ್ ಅವರು ನಿಧನ ಹೊಂದಿದ್ದರೂ ನಾವು ಆಹಾರ ಪದಾರ್ಥಗಳನ್ನು ಕಳುಹಿಸಿರುವುದನ್ನು ಮಾತ್ರ ನಿಲ್ಲಿಸಲಿಲ್ಲ ಎಂದು ಅದಮ್ಯ ಚೇತನದ ಆಹಾರ ವಿಭಾಗದ ಮುಖ್ಯಸ್ಥೆ ಶ್ರೇಯ ರಾವ್ ಅವರು ಹೇಳಿದ್ದಾರೆ.
ಪರಿಸರ ಪ್ರೇಮಿಯಾಗಿದ್ದ ಅನಂತ್ ಕುಮಾರ್
2 ವರ್ಷಗಳ ಹಿಂದೆ ಅನಂತ್ ಕುಮಾರ್ ಅವರ ಹಿರಿಯ ಪುತ್ರಿಯ ವಿವಾಹ ಅದ್ದೂರಿಯಾಗಿ ನಡೆದಿತ್ತು. ವಿವಾಹದ ವೇಳೆ ಅನಂತ್ ಕುಮಾರ್ ಅವರಲ್ಲಿದ್ದ ಪರಿಸರ ಪ್ರೇಮ ಸಾಕಷ್ಟು ಸುದ್ದಿ ಮಾಡಿತ್ತು.
ಅನಂತ್ ಕುಮಾರ್ ಅವರು ಪ್ಲಾಸ್ಟಿಕ್ ಬಳಕೆಯ ವಿರೋಧಿಯಾಗಿದ್ದರು. ಪುತ್ರಿಯ ವಿವಾಹದಲ್ಲಿ ಪರಿಸರ ಪ್ರೇಮವನ್ನು ಮೆರೆದಿದ್ದರು. ಶೂನ್ಯ ತ್ಯಾಜ್ಯ ಮದುವೆ ಅದಾಗಿತ್ತು. ವಿವಾಹ ಪೂರ್ಣಗೊಂಡ ಬಳಿಕ ಅದಮ್ಯ ಚೇತನ ಜನರಿಗೆ ಸ್ಟೀಲ್ ಪ್ಲೇಟ್ ಹಾಗೂ ಗ್ಲಾಸ್ ಗಳನ್ನು ಉಚಿತವಾಗಿ ನೀಡಿತ್ತು.