ತುಮಕೂರು: ಜಿಲ್ಲಾಧಿಕಾರಿಗಳಿಗೆ ಪೂರೈಸಿದ್ದ ಬೇಕರಿಯ ತಿನಿಸಿನಲ್ಲಿ ಸ್ಕ್ರೂ (ಮೊಳೆ) ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಬಿಸ್ಕತ್ ನಲ್ಲಿ ಮೊಳೆ ದೊರಕಿದ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಜಿಲ್ಲಾಧಿಕಾರಿ, ಇದೀಗ ಬೇಕರಿಯನ್ನೇ ಮುಚ್ಚಿಸಿದ್ದಾರೆ.
ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸೋಮವಾರ ತಡರಾತ್ರಿವರೆಗೂ ತಮ್ಮ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಭೆಯಲ್ಲಿದ್ದವರಿಗೆ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಮಹಾತ್ಮಗಾಂಧಿ ಕ್ರೀಡಾಂಗಣ ಬಳಿಯ ಮಯೂರ್ ಬೇಕ್ ಲ್ಯಾಂಡ್ ಬೇಕರಿಯಿಂದ ಕೊಬ್ಬರಿ ಬಿಸ್ಕೆಟ್ ತರಿಸಿಕೊಡಲಾಗಿತ್ತು.
ಈ ವೇಳೆ ಜಿಲ್ಲಾಧಿಕಾರಿಗಳಿಗೆ ನೀಡಿದ ಬಿಸ್ಕತ್'ನಲ್ಲಿ ಸ್ಕ್ರೂ ಪತ್ತೆಯಾಗಿದೆ. ಸ್ಕ್ರೂ ಕಂಡ ಕೂಡಲೇ ಜಿಲ್ಲಾಧಿಕಾರಿಗಳು ಒಂದು ಕ್ಷಣ ಗಲಿಬಿಲಿಗೊಂಡಿದ್ದಾರೆ. ಅಲ್ಲದೆ, ನನಗೆ ಸಿಕ್ಕಿದರೆ ಓಕೆ, ಮಕ್ಕಳು ತಿಂದರೆ ಏನು ಗತಿ ಎಂದು ಸಿಡಿಮಿಡಿಗೊಂಡರು. ಡಿಸಿ ಆದೇಶದಂತೆ ಇದೀಗ ಅಧಿಕಾರಿಗಳು ಬೇಕರಿಗೆ ಬೀಗ ಜಡಿದಿದ್ದಾರೆ.