ರೈತರೊಂದಿದೆ ಸಂಧಾನ ಮಾತುಕತೆ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ
ಬೆಂಗಳೂರು: ಕಾರ್ಖಾನೆಗಳು ನೀಡಬೇಕಾಗಿರುವ ಕಬ್ಬಿನ ಬಾಕಿ ಹಣಕ್ಕಾಗಿ ಹೊರಾಟಕ್ಕಿಳಿದಿರುವ ರೈತರೊಂದಿಗೆ ಮಂಗಳವಾರ 6 ಗಂಟೆಗಳಿಗೂ ಹೆಚ್ಚು ಕಾಲ ವಿಧಾನಸೌಧಲ್ಲಿ ಮ್ಯಾರಥಾನ್ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಿರುವ ಕುಮಾರಸ್ವಾಮಿಯವರು ಹಿಂದಿನ ಎಫ್ಆರ್'ಪಿ ದರದಂತೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ರೂ.36.65 ಕೋಟಿಯನ್ನು 15 ದಿನಗಳಲ್ಲಿ ಒಂದೇ ಕಂತಿನಲ್ಲಿ ರೈತರಿಗೆ ಪಾವತಿಸಬೇಕೆಂದು ಸೂಚನೆ ನೀಡಿದ್ದಾರೆ.
ರೈತರೊಂದಿಗೆ ನೇರ ಮಾತುಕತೆ ಮೂಲಕ ಖರೀದಿ ಮಾಡಿರುವ ಸಂಬಂಧ ಬಾಕಿ ಉಳಿಸಿಕೊಂಡಿರುವ ಸುಮಾರು ರೂ.450 ಕೋಟಿ ಪಾವತಿ ಬಗ್ಗೆ ನ.22ರೊಳಗಾಗಿ ಕಾರ್ಖಾನೆಗಳ ಮಾಲೀಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಲಾಗುವುದು. ಈ ವೇಳೆ ರೈತರಿಗೆ ಸಂಪೂರ್ಣ ಹಣ ಪಾವತಿಗೆ ಗಡುವು ವಿಧಿಸಬೇಕೆಂಬ ನಿರ್ಧಾರಗಳನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಸಭೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಆಗಮಿಸದ ಕಾರಣ ಪ್ರತಿನಿಧಿಗಳು ಹಣಕಾಸು ವಿಚಾರದ ಜವಾಬ್ದಾರಿ ತೆಗೆದುಕೊಂಡಿಲ್ಲ. ಹೀಗಾಗಿ ರೈತರ ಒಟ್ಟು ಬಾಕಿ ಪಾವತಿ ಬಗ್ಗೆ ನ.22ರೊಳಗಾಗಿ ನೇರವಾಗಿ ಮಾಲೀಕರ ಜೊತೆಗೆ ಸಭೆ ನಡೆಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಉಳಿದಂತೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ರೂ.2,750 ಎಫ್ಆರ್'ಪಿ ದರದ ಆಧಾರದಲ್ಲಿ ಕಬ್ಬು ಖರೀದಿಗೆ ಆದೇಶ ಮಾಡಿದ್ದು, ನಾಳೆಯಿಂದಲೇ ಕಬ್ಬು ಕಟಾವು ಮಾಡುವಂತೆ ಸೂಚನೆ ನೀಡಿದ್ದೇನೆಂದು ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos