ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಎಚ್ ಡಿ ಕುಮಾರಸ್ವಾಮಿ ಸಭೆ
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ಒಮ್ಮತ ಮೂಡಿಲ್ಲ. ಆದರೂ ಒಂದು ವಾರದಲ್ಲಿ ರೈತರಿಗೆ ಕಡ್ಡಾಯವಾಗಿ ಎಫ್ಆರ್ ಪಿ ದರ ಪಾವತಿಸಬೇಕು ಎಂದು ಸಿಎಂ ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದಾರೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಎಫ್ಆರ್ಪಿ ದರಕ್ಕಿಂತ 150 ರು. ಹೆಚ್ಚು ನೀಡುವಂತೆ ಕುಮಾರಸ್ವಾಮಿ ಅವರು ಕಾರ್ಖಾನೆ ಮಾಲಿಕರಿಗೆ ಸೂಚಿಸಿದರು. ಆದರೆ ಇದಕ್ಕೆ ಒಪ್ಪದ ಮಾಲೀಕರು ಸಭೆಯುದ್ದಕ್ಕೂ ತಮ್ಮ ಸಮಸ್ಯೆಗಳನ್ನೇ ಸಿಎಂ ಮುಂದಿಟ್ಟಿರು.
ಪ್ರಸಕ್ತ ಹಂಗಾಮಿನಲ್ಲಿ ಇಂತಹ ಯಾವುದೇ ಗೊಂದಲವಾಗದಂತೆ ಎಚ್ಚರ ವಹಿಸುವುದು ಕಾರ್ಖಾನೆ ಮಾಲೀಕರ ಜವಾಬ್ದಾರಿ ಎಂದ ಸಿಎಂ, ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರು ಒಂದು ವಾರದಲ್ಲಿ ಕಡ್ಡಾಯವಾಗಿ ಎಫ್ಆರ್ ಪಿ ದರ ಪಾವತಿಸಬೇಕು ಎಂದು ತಾಕೀತು ಮಾಡಿದರು.
ಸಕ್ಕರೆ ಕಾರ್ಖಾನೆ ಹಾಗೂ ಮಾಲೀಕರು ರೈತರೊಂದಿಗೆ ವಿಶ್ವಾಸದ ಮೇಲೆ ಮಾಡಿಕೊಂಡಿರುವ ಒಪ್ಪಂದ. ಆದ್ದರಿಂದ ಈ ಮೊತ್ತ ಪಾವತಿಸುವುದು ನಿಮ್ಮ ಬದ್ಧತೆ. ಕಾರ್ಖಾನೆ ಮಾಲೀಕರು ವ್ಯವಹಾರದಲ್ಲಿ ಆಗುವ ಏರುಪೇರುಗಳನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ಆದರೆ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಬಾರದಿದ್ದರೆ ಸುಧಾರಿಸಿಕೊಳ್ಳುವುದು ಕಷ್ಟ. ರೈತರ ಹಿತರಕ್ಷಣೆ ಸರ್ಕಾರದ ಕರ್ತವ್ಯವಾಗಿರುವುದರಿಂದ ರೈತರಿಗೆ ಸೂಕ್ತ ದರ ನೀಡುವಂತೆ ಕಾರ್ಖಾನೆ ಮಾಲೀಕರಿಗೆ ಕುಮಾರಸ್ವಾಮಿ ಸೂಚಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳಂತೆ ಪ್ರತಿ ರೈತನೊಂದಿಗೆ ಕಡ್ಡಾಯವಾಗಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು. ಬಳಿಕ ಕಬ್ಬು ನಿಯಂತ್ರಣ ಮಂಡಳಿಯ ನಿರ್ಣಯಗಳಂತೆ ಆದಾಯ ಹಂಚಿಕೆ ಸೂತ್ರ ಜಾರಿಗೊಳಿಸಬೇಕು ಎಂದ ಅವರು, ಇದಲ್ಲದೆ ರೈತರಿಗೆ ತೂಕ ಹಾಗೂ ಇಳುವರಿ ಪ್ರಮಾಣ ನಿಗದಿಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಹೊರಡಿಸುವ ಸುತ್ತೋಲೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಕಾರ್ಖಾನೆಗಳು ಎಫ್ಆರ್ಪಿ ದರಕ್ಕಿಂತ ಹೆಚ್ಚುವರಿ ಹಣವನ್ನು ನೀಡಿವೆ. ಉಳಿದ 9 ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಮ್ಮತಿಸಿದ ಮೊತ್ತ ನೀಡದಿದ್ದರೂ, ಎಫ್ಆರ್ ಪಿ ದರಕ್ಕಿಂತ ಹೆಚ್ಚಿಗೆ ದರ ಪಾವತಿಸಿರುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ರೈತರೊಂದಿಗೆ ಚರ್ಚಿಸಿ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವುದಾಗಿ ಮಾಲೀಕರು ಸಿಎಂಗೆ ಭರವಸೆ ನೀಡಿದರು.
2017-18ನೇ ಸಾಲಿನಲ್ಲಿ ಸಕ್ಕರೆ ದರ ಏಕಾಏಕಿ ಕುಸಿದಿದ್ದರಿಂದ ಹಾಗೂ ಇನ್ನಿತರ ವಿವಿಧ ಸಮಸ್ಯೆಗಳ ಕಾರಣದಿಂದ ಈ ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ 2900 ರೂಪಾಯಿನಲ್ಲಿ ಸಾರಿಗೆ ಮತ್ತು ಕಟಾವು ವೆಚ್ಚ 650 ರೂಪಾಯಿ ಕಡಿತಗೊಳಿಸಿ, ಪ್ರತಿ ಟನ್ ಗೆ 2250 ರೂಪಾಯಿ ದರದಲ್ಲಿ ರೈತರಿಗೆನೀಡಲು ಒಪ್ಪಿಕೊಂಡಿರುವುದಾಗಿ ಮಾಲೀಕರು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos