ರಾಜ್ಯ

ಬೆಂಗಳೂರಿನಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಳ; ನಿರಾಸೆ, ಆತಂಕ, ಅಭದ್ರತೆಯಲ್ಲಿ ನಗರ ನಿವಾಸಿಗಳು

Sumana Upadhyaya

ಬೆಂಗಳೂರು: ಸಾಮಾಜಿಕ ಗೊಂದಲ ಮತ್ತು ಸುಲಭವಾಗಿ ಹಣ ಮಾಡಿಕೊಳ್ಳಬೇಕೆಂಬ ಹಪಾಹಪಿಯಿಂದ ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಅಪರಾಧಗಳ ಪ್ರಮಾಣ ಹೆಚ್ಚಳವಾಗಿದೆ.

ಕಳೆದ ಎರಡು ವಾರಗಳಲ್ಲಿ ನಗರದಲ್ಲಿ ಎಂಟು ಕೊಲೆ, 27 ದರೋಡೆ, 148 ಹಲ್ಲೆ ಕೇಸುಗಳು, 33 ಕೊಲೆ ಯತ್ನ ಪ್ರಕರಣಗಳು ಮತ್ತು 8 ಅತ್ಯಾಚಾರ ಕೇಸುಗಳು ವರದಿಯಾಗಿವೆ. ಇದು ಪೊಲೀಸ್ ಇಲಾಖೆಯಿಂದ ಸಿಕ್ಕಿರುವ ವರದಿಯಾದರೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ ಎನ್ನುತ್ತಾರೆ ತಜ್ಞರು. ನಗರದಲ್ಲಿ ಅಲ್ಲಲ್ಲಿ ಹಿಂಸೆ, ಚಾಕುವಿನಿಂದ ಇರಿತ, ಕೊಲೆ ಪ್ರಕರಣಗಳು ವರದಿಯಾಗುತ್ತಿರುತ್ತವೆ.

ಇಷ್ಟೊಂದು ಅಪರಾಧಗಳ ಸಂಖ್ಯೆ ಹೆಚ್ಚಾಗಲು ಜನರಲ್ಲಿ ಗೊಂದಲ, ಸುಲಭವಾಗಿ ಹಣ ಗಳಿಸಬೇಕೆಂಬ ದುರಾಸೆ, ಹಣದ ಕೊರತೆ ಮುಖ್ಯ ಕಾರಣ ಎನ್ನುತ್ತಾರೆ ಬೆಂಗಳೂರಿನಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ಸ್ (IIHS) ನಲ್ಲಿ ಸಂಶೋಧಕರು.
ಸಮಾಜದ ಪರಿಸ್ಥತಿ ಬದಲಾವಣೆ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಈ ಹಿಂದೆ ನಗರದಲ್ಲಿ ಅಪರಾಧಗಳು ನಡೆಯುತ್ತಿರಲಿಲ್ಲವೆಂದಲ್ಲ. ಆದರೆ ಪಕ್ಕದ ಮನೆಯ ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸುವಂತಹ ಹೀನ ಮತ್ತು ಅಪರೂಪದ ಕೃತ್ಯಕ್ಕಿಳಿಯುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎನ್ನುತ್ತಾರೆ ಸಂಸ್ಥೆಯ ಸಂಶೋಧಕ ಗರಿಮಾ ಎನ್ ಜಿ.



ಇತ್ತೀಚೆಗೆ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಪತ್ನಿ ಜೊತೆ ಜಗಳವಾಡುತ್ತಿದ್ದರು. ಜಗಳ ವಿಕೋಪಕ್ಕೆ ಹೋಗಿ ಅಡುಗೆ ಮನೆಯಲ್ಲಿದ್ದ ಚೂರಿಯನ್ನು ತೆಗೆದುಕೊಂಡು 49 ಬಾರಿ ಇರಿದರು. ಹಲವು ಯುವಜನರು, ನವದಂಪತಿ ಸಣ್ಣ ಪಟ್ಟಣದಿಂದ ಬೆಂಗಳೂರಿಗೆ ಬಂದು ಉದ್ಯೋಗ ಮಾಡುತ್ತಿರುತ್ತಾರೆ. ಇಲ್ಲಿನ ಜೀವನಶೈಲಿಗೆ ಒಗ್ಗಿಕೊಳ್ಳಲಾಗದೆ ತೀವ್ರ ಒತ್ತಡ ಅನುಭವಿಸುತ್ತಿರುತ್ತಾರೆ. ಒತ್ತಡ, ಸಂಗಾತಿಯೊಂದಿಗೆ ಸಮಯ ಕಳ ಯಲು ಸಾಧ್ಯವಾಗದೆ ಅನೈತಿಕ ಸಂಬಂಧದಲ್ಲಿ ತೊಡಗುತ್ತಾರೆ. ಇಂದು ಸಂಬಂಧಗಳನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅನೇಕ ದಂಪತಿ ಜೀವನದಲ್ಲಿ ಗಂಭೀರ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ಮಾಜಿ ಸಾಫ್ಟ್ ವೇರ್ ಎಂಜಿನಿಯರ್ ಹಾಗೂ ಲೈಫ್ ಕೋಚ್ ಆಗಿ ಕೆಲಸ ಮಾಡುತ್ತಿರುವ ಗಿರೀಶ್ ಹೆಚ್ ಎನ್.

ನಗರ ಆರ್ಥಿಕತೆ ಮತ್ತು ಅಪರಾಧಗಳ ದರ ಸಂಶೋಧಕ ಆಶಿಶ್ ಭಾರದ್ವಾಜ್, ನಗರದಿಂದ ನಗರಕ್ಕೆ ಅಪರಾಧಗಳ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಅದು ಅಲ್ಲಿನ ಆರ್ಥಿಕ, ನಿರುದ್ಯೋಗ ಸಮಸ್ಯೆ, ಜನಸಂಖ್ಯೆ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಹೊಂದಿರುತ್ತದೆ. ಭಾರತದಲ್ಲಿ ಶೇಕಡಾ 30ರಷ್ಟು ಜನರು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಸಾಮಾಜಿಕ ಭದ್ರತೆಯಿರುವುದಿಲ್ಲ. ಇದರಿಂದ ನಿರಾಶೆಗೊಳಗಾಗಿ ಅಪರಾಧಗಳಿಗೆ ಕೈ ಹಾಕುತ್ತಾರೆ.

SCROLL FOR NEXT