ಬೆಂಗಳೂರು: ಜಮೀನ್ದಾರರೊಬ್ಬರನ್ನು ಅಪಹರಿಸಿ, ಅವ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿ, ಬಳಿಕ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಜಮೀನ್ದಾರ ಸಂಪಿಗೆಹಳ್ಳಿಯ ವೆಂಕಟೇಶ್ವರನಗರ ನಿವಾಸಿ ವೆಂಕಟಪತಿ (52) ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ವೆಂಕಟಪತಿ ಕಾಣೆಯಾಗಿದ್ದಾರೆ ಎಂದು ಅವರ ಅಳಿಯ ಅವಿನಾಶ್ ಅವರು ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇಂದು ಮುಂಜಾನೆ 1.30ರ ವೇಳೆಗೆ ವೆಂಕಟಪತಿಯವರ ಶವ ದೊಡ್ಡಬಳ್ಳಾಪುರ ಸಿಆರ್ಪಿಎಫ್ ರಸ್ತೆಯಿಂದ ಮಾವಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಪತ್ತೆಯಾಗಿತ್ತು. ಅವರ ಮೈಮೇಲಿದ್ದ 8 ಚಿನ್ನದ ಉಂಗುರ, ಕುತ್ತಿಗೆಯ ಚೈನ್, ಒಂದು ಬ್ರೇಸ್ಲೆಟ್, ರ್ಯಾಡೋ ವಾಚ್ ಅನ್ನು ದುಷ್ಕರ್ಮಿಗಳು ದೋಚಿದ್ದಾರೆ ಎಂದು ತಿಳಿದುಬಂದಿದೆ.
ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ದುಷ್ಕರ್ಮಿಗಳು ವೆಂಕಟಪತಿಯವರನ್ನು ಅಪಹರಿಸಿ ಚಿನ್ನಾಭರಣ ದೋಚಿ ಕೊಲೆ ಮಾಡಿ, ಶವವನ್ನು ದೊಡ್ಡಬಳ್ಳಾಪುರದ ಬಳಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos