ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಪರಶುರಾಮ್ ವಾಗ್ಮೋರೆ ಮಾಡಿದ್ದ ಆರೋಪಗಳನ್ನು ಎಸ್ಐಟಿ ಬುಧವಾರ ತಳ್ಳಿಹಾಕಿದೆ.
ಕೆಲ ದಿನಗಳ ಹಿಂದಷ್ಟೇ ತಪ್ಪೊಪ್ಪಿಕೊಳ್ಳುವಂತೆ ಅಧಿಕಾರಿಗಳು ಆಮಿಷ ನೀಡುತ್ತಿದ್ದಾರೆ. ರೂ.30 ಲಕ್ಷ ನೀಡುತ್ತೇವೆ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ತಿಳಿಸುತ್ತಿದ್ದಾರೆ. ಅಲ್ಲದೆ, ಬಲವಂತದಿಂದ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಗಳು ಆರೋಪಿಸಿದ್ದರು.
ಈ ಆರೋಪಗಳ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಸ್ಐಟಿ ಅಧಿಕಾರಿಗಳು, ಸಹಾನುಭೂತಿ ಗಳಿಸುವ ಸಲುವಾಗಿ ಸಾಮಾನ್ಯವಾಗಿ ಆರೋಪಿಗಳು ಈ ರೀತಿಯ ತಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ಇದೇ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಆರೋಪಿಗಳ ಆರೋಪಗಳು ಆಶ್ಚರ್ಯವನ್ನು ತಂದಿದೆ. ಆದರೆ, ಅದಾವುದಕ್ಕೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ತಪ್ಪಿತಸ್ಥರೆಂದು ಹೇಳಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಸಚಿನ್ ಅಂದುರೆ ಸಹೋದರ ಮಾಧ್ಯಮಗಳೊಂದಿಗೆ ಮಾತನಾಡಿ ತನ್ನ ಸಹೋದರ ಮುಗ್ದ, ಆತನನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿದ್ದ. ಇದೇ ರೀತಿ ಆರೋಪಿಗಳ ಪರ ವಕೀಲರು ಹಾಗೂ ಬೆಂಬಲಿಗರು ಆರೋಪಗಳನ್ನು ಮಾಡುತ್ತಿರುತ್ತಾರೆಂದು ತಿಳಿಸಿದ್ದಾರೆ.
ಸಾರ್ವಜನಿಕರ ಸಹಾನುಭೂತಿ ಗಳಿಸುವ ಸಲುವಾಗಿ ಅವರು ಇಂತಹ ಕತೆಗಳನ್ನು ಕಟ್ಟುತ್ತಿರುತ್ತಾರೆ. ಇಂತಹ ಆರೋಪಗಳು ಕೇಳಿಬಂದಾಗ ತನಿಖೆಗೆ ಆದೇಶಿಸಲಾಗುತ್ತದೆ. ಇದರಿಂದ ನಮ್ಮ ಗಮನ ಹಾಗೂ ಸಮಯ ಬೇರೆಡೆಗೆ ತಿರುಗುತ್ತದೆ. ಈ ವೇಳೆ ಆರೋಪಿಗಳು ಇದರಿಂದ ಲಾಭ ಪಡೆಯಲು ಯತ್ನಿಸುತ್ತಾರೆ. ವಾಗ್ಮೋರೆಯನ್ನು ಹಲವು ಬಾರಿ ನ್ಯಾಯಮೂರ್ತಿಗಳ ಬಳಿ ಹಾಜರು ಪಡಿಸಿದ್ದೆವು. ಆದರೆ, ಆತ ಒಂದೂ ಬಾರಿ ಕೂಡ ನ್ಯಾಯಮೂರ್ತಿಗಳ ಬಳಿ ಈ ರೀತಿ ಹೇಳಿಕೆ ನೀಡಿರಲಿಲ್. ಆದರೆ, ಇದೀಗ ಇದ್ದಕ್ಕಿದ್ದಂತೆ ಆರೋಪಗಳನ್ನು ಮಾಡಲು ಆರಂಭಿಸಿದ್ದಾನೆ. ಆತನ ಪರ ವಕೀಲ ಈ ವರೆಗೂ ಮೂರು ಬಾರಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಆಗೇಕೆ ಈ ರೀತಿಯ ಆರೋಪಗಳ ಬಗ್ಗೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos