ಸುಧಾಮೂರ್ತಿಗೆ ಅಧಿಕೃತ ಆಹ್ವಾನ ನೀಡಿದ ಮೈಸೂರು ಜಿಲ್ಲಾಡಳಿತ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನೆಗಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ಬುಧವಾರ ಆಹ್ವಾನ ನೀಡಲಾಗಿದೆ.
ಬುಧವಾರ ಮೈಸೂರು ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಬೆಂಗಳೂರಿನ ಜಯನಗರದ ಇನ್ಫೋಸಿಸ್ ಫೌಂಡೇಶನ್ ಕಚೇರಿಗೆ ಆಗಮಿಸಿ ಆಮಂತ್ರಣ ನೀಡಿದ್ದಾರೆ. ಈ ವೇಳೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸುಧಾಮೂರ್ತಿ ಅವರು, 'ನನಗೆ ಬಹಳ ಸಂಸವಾಗಿದೆ. ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿದೆ. ನಾಡಿನ ಪ್ರತಿಯೊಬ್ಬ ಪ್ರಜೆಗೂ ಬಹಳ ದೊಡ್ಡ ಗೌರವ. ಅರವತ್ತು ವರ್ಷಗಳ ಹಿಂದೆ ಅಂದರೆ ನಾನು 8 ವರ್ಷದವಳಿದ್ದಾಗ ದಸರಾ ನೋಡಿದ್ದೆ. ಈಗ 68ನೇ ವಯಸ್ಸಿಗೆ ದಸರಾ ನೋಡಲು ಉತ್ಸುಕಳಾಗಿದ್ದೇನೆ. ರಾಜ್ಯ ಸರ್ಕಾರ ನನಗೆ ಆಹ್ವಾನ ನೀಡಿರುವುದು ತುಂಬಾ ಸಂತೋಷವಾಗಿದೆ. 10 ದಿನವೂ ಅಲ್ಲೇ ಇರಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದರು.
ಸರಳ ಸಜ್ಜನಿಕೆಗೆ ಹೆಸರಾದ, ಸಾಮಾಜಿಕ ಕಾರ್ಯಗಳಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಲೇಖಕರಾಗಿಯೂ ಗಮನ ಸೆಳೆದಿರುವ ಸುಧಾಮೂರ್ತಿ ಅವರಿಂದ ಈ ಬಾರಿಯ ದಸರಾವನ್ನು ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ತಿಳಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos