ಬೆಂಗಳೂರು: ಜಾಹೀರಾತು ಫಲಕ ಅಳವಡಿಕೆಗೆ ತೆರವುಗೊಳಿಸದ ಆರೋಪದ ಹಿನ್ನಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಅಧಿಕಾರಿಯು ಪ್ರಕರಣದಲ್ಲಿ ಸಚಿವರ ಪಾತ್ರವಿಲ್ಲ ಎಂದು ಪೊಲೀಸರಿಗೆ ಮರು ಹೇಳಿಕೆ ನೀಡಿದ್ದಾರೆ.
ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಜಾಹೀರಾತು ಹಾಕುತ್ತಿದ್ದರಿಂದಾಗಿ ನಗರದ ಅಂದ ಹಾಳಾಗುತ್ತಿದೆ ಎಂದು ಹೈಕೋರ್ಟ್ ತೀವ್ರವಾಗಿ ಕೆಂಡಾಮಂಡಲಗೊಂಡಿತ್ತು. ಕೂಡಲೇ ಕಾರ್ಯಾಚರಣೆ ಕೈಗೊಂಡು ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಸೂಚಿಸಿತ್ತು.
ಈ ಹಿನ್ನಲೆಯಲ್ಲಿ ಬಿಬಿಎಂಪಿ ಅದಿಕಾರಿಗಳು ಜಾಹೀರಾತು ಫಲಕಗಳನ್ನು ತೆರವುಗೊಳಿಸಿ, ಜಾಹೀರಾತು ಫಲಕ ಅಳವಡಿಸಿದವರ ವಿರುದ್ಧ ದೂರು ದಾಖಲು ಮಾಡುತ್ತಿದ್ದಾರೆ.
ಪಂತರಪಾಳ್ಯ ಜಂಕ್ಷನ್ ಸಮೀಪದ ಸ್ಥಳದಲ್ಲಿ ಜಾಹೀರಾತು ಫಲಕ ಅಳವಡಿಕೆಗೆ ಬಳಸಿದ್ದ ಲೋಹದ ಚೌಕಟ್ಟು ತೆರವುಗೊಳಿಸಿಲ್ಲ ಎಂದು ಆರ್.ಆರ್ ನಗರ ಉಪ ವಿಭಾಗದ ಕಂದಾಯ ಅಧಿಕಾರಿ ಮುತ್ತುರಾಜ್ ಅವರು ಬ್ಯಾಟರಾಯನಪುರ ಠಾಣೆಯಲ್ಲಿ ಸಚಿವರ ವಿರುದ್ಧ ಸೆ.24 ರಂದು ದೂರು ನೀಡಿದ್ದರು.
ಇದೀಗ ಪ್ರಕರಣ ಸಂಬಂಧ ಮರು ಹೇಳಿಕೆ ನೀಡಿರುವ ಮುತ್ತುರಾಜ್ ಅವರು ಪ್ರಕರಣದಲ್ಲಿ ಶಿವಕುಮಾರ್ ಅವರದ್ದು ಯಾವುದೇ ತಪ್ಪಿಲ್ಲ. ಭೂ ಮಾಲೀಕರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಎಫ್ಐಆರ್ ದಾಖಲಾದ ಬಳಿಕ ಜಾಹೀರಾತನ್ನು ತೆಗೆದು ಹಾಕಲಾಗಿದೆ. ಹೀಗಾಗಿ ದೂರನ್ನು ಹಿಂದಕ್ಕೆ ಪಡೆದಿದ್ದೇನೆ. ಇತರೆ ಪ್ರಕರಣದಲ್ಲಿ ಮಾಡಿದಂತೆಯೇ ಮಾಡಿದ್ದೇವೆಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos