ಮಂಗಳೂರು: ಮಂಗಳೂರು ಪಣಂಬೂರು ಬೀಚ್ ಇಂದು (ಶನಿವಾರ) ಎರಡು ದುರದೃಷ್ಟಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಓರ್ವ ವೃದ್ದ ಸಮುದ್ರಕ್ಕೆ ಹಾರಿ ಪ್ರಾಣ ಬಿಡುವ ಯತ್ನದಲ್ಲಿದ್ದವನನ್ನು ಅಪಾಯದಿಂದ ಪಾರುಮಾಡಲಾಗಿದೆ, ಇದೇ ಸಮಯದಲ್ಲಿ ಓರ್ವ ಯುವಕ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುಮಾರು ಮಧ್ಯಾಹ್ನ 1:15 ರಿಂದ 1:30ರ ನಡುವೆ ನಡೆದ ಘಟನೆಯಲ್ಲಿ ಬೆಳ್ತಂಗಡಿಯ ಕೇಶವ ಗೆರುಕಟ್ಟೆಯವರ ಮಗ ಸುಂದರ್ ರಾಜ್ (18 ) ಸ್ನೇಹಿತರ ಜತೆ ಸಮುದ್ರ ಕಿನಾರೆಯಲ್ಲಿದ್ದರು.ಸುಮಾರು 12 ಹುಡುಗರು ನೀರಿನಲ್ಲಿ ಇಳಿಯಲು ಮುಂದಾದಾಗ ಅವರನ್ನು ಹಿಂತಿರುಗುವಂತೆ ಕೇಳಲಾಗಿತ್ತು. ಸಮುದ್ರದಲ್ಲಿ ಅಲೆಗಳ ಅಬ್ಬರ ಅತಿಯಾಗಿರುವ ಕಾರಣ ಅಪಾಯವಾಗಲಿದೆ ಎಂದು ಎಚ್ಚರಿಸಲಾಗಿತ್ತು.ಆದರೆ ಯಾರೊಬ್ಬರು ಪ್ರತಿಕ್ರಿಯೆ ನೀಡುವ ಮುನ್ನವೇ ಸುಂದರ್ ರಾಜ್ ಸಮುದ್ರಕ್ಕೆ ಜಿಗಿದಿದ್ದನು. ಸದ್ಯ ನಾಪತ್ತೆಯಾಗಿರುವ ಈತನ ದೇಹಕ್ಕಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ ಎಂದು ಪಣಂಬೂರು ಇನ್ಸ್ಪೆಕ್ಟರ್ ರಫಿಕ್ ಕೆ ಎಮ್ ಹೇಳಿದ್ದಾರೆ.
ಈ ಘಟನೆ ನಡೆಯುವ ಕೆಲವೇ ಸಮಯಕ್ಕೆ ಮುನ್ನ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟಿಯವರಾದ ಮಲ್ಲದೇವರು ಅವರ ಪುತ್ರ ಮಹದೇವಪ್ಪ (69) ಮುಖ್ಯ ಸಮುದ್ರ ತೀರದಿಂದ ದಕ್ಷಿಣ ಭಾಗದಲ್ಲಿ ಸಮುದ್ರಕ್ಕಿಳಿದು ಆತ್ಮಹತ್ಯೆಗೆ ಯತ್ನಿಸಿದ್ದರು.ಈತನನ್ನು ಅಪಾಯದಿಂದ ಪಾರುಮಾಡಿ ಪೋಲೀಸರಿಗೆ ಒಪ್ಪಿಸಲಾಗಿದೆ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಪ್ರಾಧಿಕಾರ ಸಿಇಒ ಯತೀಶ್ ಬೈಕಂಪಾಡಿ ಹೇಳಿದ್ದಾರೆ.
ಗುಂಡ್ಲುಪೇಟೆಯಿಂದ ಅವರ ಮಗ ಆಗಮಿಸುತ್ತಿದ್ದಾರೆ ಎಂದು ಪೋಲೀಸರು ಹೇಳಿದ್ದು ಆರು ವರ್ಷದ ಹಿಂದೆ ಅವರು ಹೆಂಡತಿಯಿಂದ ದೂರಾಗಿ ಮಗನೊಡನೆ ವಾಸಿಸುತ್ತಿದ್ದರು. ಆತ್ಮಹತ್ಯೆಗೆ ಯತ್ನಿಸುವ ಮುನ್ನ ಅವರು ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.