ಮೈಸೂರು: ನಾಡಹಬ್ಬ ಮೈಸೂರು ದಸರಾದ ಐತಿಹಾಸಿಕ ಜಂಬೂ ಸವಾರಿಗೆ ಅದ್ದೂರಿ ತೆರೆ ಕಂಡಿದೆ. 7ನೇ ಬಾರಿ 750 ಕೆಜಿ ತೂಕದ ಅಂಬಾರಿಯನ್ನು ಚಿನ್ನದ ಅಂಬಾರಿ ಹೊತ್ತ ಅರ್ಜುನ ಅರಮನೆಯಿಂದ ಬನ್ನಿಮಂಟಪದತ್ತ ಸಾಗಿ ನಂತರ ಅರಮನೆಗೆ ತೆರಳಿತು.
ಚಿನ್ನದ ಅಂಬಾರಿಯೊಳಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಇಡಲಾಗಿತ್ತು. ಅದರ ಎಡ-ಬಲಗಳಲ್ಲಿ ಕುಮ್ಕಿ ಆನೆಗಳಾದ ಕಾವೇರಿ, ವರಮಹಾಲಕ್ಷ್ಮಿ ಸಾಥ್ ನೀಡಿದರು. ಜಂಬೂ ಸವಾರಿಯಲ್ಲಿ ಮುಂಚೂಣಿಯಲ್ಲಿ ಬಲರಾಮ ಹೆಜ್ಜೆ ಹಾಕಿದ್ದು, ಅಭಿಮನ್ಯು, ನೌಫತ್ ಆನೆ ಸೇರಿದಂತೆ ಇನ್ನುಳಿದ ಆನೆಗಳು ಸಾಲು ಸಾಲಾಗಿ ಸಾಗಿದವು. ಜಂಬೂಸವಾರಿ ಹಿಂದೆ ಸ್ತಬ್ಧ ಚಿತ್ರಗಳ ಮೆರವಣಿಗೆ ಸಾಗಿದವು. ಈ ಬಾರಿ 42 ಸ್ತಬ್ಧ ಚಿತ್ರಗಳು ಪಾಲ್ಗೊಂಡಿದ್ದವು.
ಜಂಬೂ ಸವಾರಿಯ ನೇರ ಪ್ರಸಾರವನ್ನು ಚಂದನ ವಾಹಿನಿಯಲ್ಲಿ ನೇರವಾಗಿ ವೀಕ್ಷಿಸಲು ಮೈಸೂರು ನಗರದ 22 ಕಡೆಗಳಲ್ಲಿ ಎಲ್ ಸಿಡಿ ಪರದೆಯನ್ನು ಅಳವಡಿಸಲಾಗಿತ್ತು. ಕೆ ಆರ್ ವೃತ್ತದ ಬಳಿ 4 ಪರದೆಗಳು, ಸಯ್ಯಾಜಿ ರಾವ್ ಮಾರ್ಗ ಮೂಲಕ ಬನ್ನಿಮಂಟಪದವರೆಗೆ 22 ಪರದೆಗಳನ್ನು ಅಳವಡಿಸಲಾಗಿತ್ತು.