ಎನ್ಐಎ 'ಮೋಸ್ಟ್ ವಾಂಟೆಡ್' ಲಿಸ್ಟ್ ನಲ್ಲಿ ಪುತ್ತೂರು ಯುವಕನ ಹೆಸರು!
ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೇಶದಾದ್ಯಂತ ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿಸಿಕೊಂಡು ತಲೆಮರೆಸಿಕೊಂಡಿರುವ 'ಮೋಸ್ಟ್ ವಾಂಟೆಡ್' ಉಗ್ರರು ಹಾಗೂ ಅಪರಾಧಿಗಳ ಹೆಸರನ್ನು ಪಟ್ಟಿ ಮಾಡಿದ್ದು ಇದರಲ್ಲಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ನೂಜಿಬಾಳ್ತಿಲ ಜಯಪ್ರಕಾಶ್ ಅಲಿಯಾಸ್ ಅಣ್ಣಾ ಹೆಸರು ಸೇರ್ಪಡೆಯಾಗಿದೆ.
ಸನಾತನ ಸಂಸ್ಥೆಯೊಡನೆ ಸಂಬಂಧ ಹೊಂದಿದ್ದ ಜಯಪ್ರಕಾಶ್ ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪನ್ಸಾರೆ ಕೊಲೆ, ಮಾಲೆಗಾಂವ್ ಸ್ಪೋಟ, ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್ಪ್ರೆಸ್ ಬಾಂಬ್ ಸ್ಫೋಟ, ಗೋವಾ ಮತ್ತು ಹೈದರಾಬಾದ್ ಮೆಕ್ಕಾಮಸೀದಿ ಸ್ಫೋಟ ಇನ್ನಿತರೆ ಪ್ರಕರಣದಲ್ಲಿ ಆರೋಪಿಯೆಂದು ಗುರುತಿಸಲ್ಪಟ್ಟಿದ್ದಾನೆ.
ಪುತ್ತೂರಿನ ಕಡಬ ಮೂಲದವನಾದ ಜಯಪ್ರಕಾಶ್ ಅಲಿಯಾಸ್ ಅಣ್ಣಾ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದು ಮಾಲೆಗಾಂವ್ ಸ್ಪೋಟಕ್ಕೆ ಮುನ್ನ ಆಗಾಗಾ ಊರಿಗೆ ಆಗಮಿಸುತ್ತಿದ್ದ. ಆದರೆ ಅದರ ನಂತರ ಇತ್ತ ಸುಳಿಯಲಿಲ್ಲ ಎಂದು ಅವರ ಕುಟುಂಬ ಮೂಲಗಳು ಹೇಳಿದೆ.
ಜಯಪ್ರಕಾಶ್ ನನ್ನು ಹುಡುಕಿಕೊಂಡು ರಾಷ್ಟ್ರೀಯ ತನಿಖಾ ದಳದವರು 2-3 ವರ್ಷದ ಹಿಂದೆ ಕಡಬಕ್ಕೆ ಸಹ ಆಗಮಿಸಿದ್ದರು.
ಇನ್ನುಳಿದಂತೆ ಎನ್ಐಎಪಟ್ಟಿಯಲ್ಲಿರುವ ಇನ್ನಿತರೆ ಮೋಸ್ಟ್ ವಾಂಟೆಡ್ ವ್ಯಕ್ತಿಗಳೆಂದರೆ - ಮುಂಬಯಿ ದಾಳಿ ಮಾಸ್ಟರ್ ಮೈಂಡ್ ಹಫೀಸ್ ಸಯೀದ್, ಲಷ್ಕರೆ ಉಗ್ರ ಸಂಘಟನೆ ಮುಖ್ಯಸ್ಥ ರೆಹಮಾನ್ ಲಖ್ವಿ, ವಿವಾದಿತ ಇಸ್ಲಾಮಿಕ್ ಪ್ರವಚನಕಾರ ಜಾಕಿರ್ ನಾಯ್ಕ್ ಮೊದಲಾದವರಾಗಿದ್ದಾರೆ.
ಇಂತಹಾ ಮೋಸ್ಟ್ ವಾಂಟೆಡ್ ಉಗ್ರರು ಹಾಗೂ ನಕ್ಸಲರ ಬಂಧನಕ್ಕೆ ಸಾರ್ವಜನಿಕರು ನೆರವಾಗಬೇಕು ಎಂದು ಸಂಸ್ಥೆ ಮನವಿ ಮಾಡಿದೆ.ಭಾರತವನ್ನು ಒಂದು ಸುರಕ್ಷಿತ ತಾಣವನ್ನಾಗಿಸಲು ನಾಗರಿಕರು ತನಿಖಾ ಸಂಸ್ಥೆ ಜತೆ ಕೈಜೋಡಿಸಬೇಕು ಎಂದು ಅದು ಹೇಳಿದೆ