ಬೆಂಗಳೂರು: ಮೊದಲ ಬಾರಿಗೆ ಸಮಾಜ ಕಾರ್ಯ ಶಿಕ್ಷಣ ಪರಿಚಯಿಸಿದ್ದ ಚಿಂತಕ ಪ್ರೋಫೆಸರ್ ಹೆಚ್. ಎಂ. ಮರುಳ ಸಿದ್ದಯ್ಯ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಉಸಿರಾಟದ ತೊಂದರೆಯಿಂದ ಬೆಂಗಳೂರಿನಲ್ಲಿ ಮೃತಪಟ್ಟ ಮರಳು ಸಿದ್ದಯ್ಯ ಅವರಿಗೆ ಚಾಮರಾಜಪೇಟೆಯ ವೀರಶೈವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಬೆಂಗಳೂರಿನಲ್ಲಿ ನಿಧನರಾಗಿದ್ದು, ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಆಗಲಿದ್ದಾರೆ.
ಕೊಡ್ಲಿಗಿ ತಾಲೂಕಿನ ಹಿರೇಕುಂಬಳ ಕುಂಟೆಯಲ್ಲಿ 1931ರಲ್ಲಿ ಜನಿಸಿದ ಹೆಚ್. ಎಂ. ಮರುಳ ಸಿದ್ದಯ್ಯ , ಮೈಸೂರು ವಿ.ವಿ. ದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಹಾಗೂ ಸಮಾಜ ಕಾರ್ಯದಲ್ಲಿ ದೆಹಲಿಯ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳು. ವಾರಣಾಸಿಯ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದರು.
ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ ಮುಂತಾದ ಹಲವಾರು ಯೋಜನೆಗಳ ರೂವಾರಿಯಾಗಿ ಸಮಾಜಕಾರ್ಯ ಶಿಕ್ಷಣ, ಕ್ಷೇತ್ರ ಕಾರ್ಯ, ಸಂಘಟನೆ, ಸಾಹಿತ್ಯರಚನೆಯಲ್ಲಿ ಮರುಳ ಸಿದ್ದಯ್ಯ ತೊಡಗಿಸಿಕೊಂಡಿದ್ದರು.ಇಂದಿನ ಸ್ವಚ್ಛ ಭಾರತ ಕಲ್ಪನೆಯನ್ನು 1990 ರ ದಶಕದಲ್ಲಿ ನಿರ್ಮಲ ಕರ್ನಾಟಕ ಎಂಬ ಹೆಸರಿನಲ್ಲಿ ಚಾಲ್ತಿಗೆ ತಂದು ಗುಂಪು ಶೌಚಾಲಯಗಳನ್ನು ನಿರ್ಮಿಸಲು ಕಾರಣಕತೃರಾಗಿದ್ದರು.
ಇವರು ಬರೆದ ಕೃತಿಗಳಲ್ಲಿ ವಿಷಬಿಂದು (ಕಥನಕಾವ್ಯ), ಸಾವಿನ ಸೆಳವಿನಲ್ಲಿ (ಜೀವನ ಕಥೆಗಳು) ಮುಂತಾದ ಸಾಹಿತ್ಯ ಕೃತಿಗಳಷ್ಟೇ ಅಲ್ಲದೆ ಸಮಾಜಕಾರ್ಯ, ಮಾನವ ಸಮಾಜ ಹಾಗೂ ಸಮಾಜಶಾಸ್ತ್ರ, ಸಮುದಾಯ ಸಂಘಟನೆ, ಸಮಾಜಶಾಸ್ತ್ರದ ಕೆಲವು ಪಾಠಗಳು,ಮಾನವ ಸಂಪನ್ಮೂಲ ಸಂವರ್ಧನೆ, ಗ್ರಾಮೋನ್ನತಿ, ನಾವು ಮತ್ತು ಸಹಕಾರ, ಪಂಚಮುಖಿ ಅಭ್ಯುದಯ ಮಾರ್ಗ, ಮುಂತಾದ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ 60 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.