ಬೆಂಗಳೂರು: ಬಡವರ, ರೈತರ ಹಾಗೂ ಆದಿವಾಸಿಗಳ ಪರ ಧ್ವನಿ ಎತ್ತುವವರು ನಗರದ ನಕ್ಸಲರು ಎಂದು ಕರೆಯುವುದಾದರೆ ನಾವೂ ನಗರದ ನಕ್ಸಲರೇ? ಎಂದು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರು ಬುಧವಾರ ಪ್ರಶ್ನಿಸಿದ್ದಾರೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಗೌರಿ ಲಂಕೇಶ್ ಟ್ರಸ್ಟ್ ಮತ್ತು ಗೌರಿ ಬಳ ಹಮ್ಮಿಕೊಂಡಿದ್ದ ರಾಜಭವನ ಚಲೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಗ್ನಿವೇಶ್ ಅವರು, ಮಾನವ ಪರಿವಾರವರು ಒಂದೇ. ನಮ್ಮ ಮಾತಿಗೆ ನೀವು ಗುಂಡಿನ ಮೂಲಕ ಪ್ರತಿಕ್ರಿಯಿಸಿದರೆ, ನಾವು ಮತದಾನದ ಮೂಲಕ ಉತ್ತರಿಸುತ್ತೇವೆ ಎಂದರು.
ಇದೇ ವೇಳೆ ಸನಾತನ ಸಂಸ್ಥೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಗ್ನಿವೇಶ್ ಅವರು, ಅದು ಸಾಮಾನ್ಯ ಧರ್ಮ ಪ್ರಚಾರ ಸಂಸ್ಥೆ ಅಲ್ಲ. ಅದೊಂದು ಭಯೋತ್ಪದನಾ ಸಂಸ್ಥೆ. ಅದರ ಮೇಲೆ ಸರ್ಕಾರ ತೀವ್ರ ನಿಗಾ ವಹಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ ಎಸ್ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಗ್ನಿವೇಶ್, ಮೋದಿ ಒಬ್ಬ ಸಂಘ ಪ್ರಚಾರಕ, ಅವರನ್ನು ಗುಜರಾತ್ ನ ಮುಖ್ಯಮಂತ್ರಿ ಮಾಡಲಾಯಿತು. ಆರ್ ಎಸ್ಎಸ್ ಎಂದರೆ ಬಹುಮುಖಿ ರಾಕ್ಷಸ. ಬೇರೆ ಬೇರೆ ಹೆಸರುಗಳಲ್ಲಿ ಅದರ ಅಸ್ತಿತ್ವ ಇದೆ. ಅದರ ನಾಯಕ ಇಟ್ಲರ್ ಎಂದು ಆರೋಪಿಸಿದರು. ಅಲ್ಲದೆ ಆರ್ ಎಸ್ಎಸ್ ಬಹುಮುಖಿ ಸಂಸ್ಥೆಗಳಲ್ಲಿ ಸನಾತನ ಸಂಸ್ಥೆಯೂ ಒಂದು ಎಂದು ದೂರಿದರು.