ಬೆಂಗಳೂರು: ನಾನು ಕೂಡ ಅರ್ಬನ್ ನಕ್ಸಲ್ (ನಗರದ ನಕ್ಸಲ್ ವಾದಿ) ಎಂದು ಜ್ಞಾನಪೀಠ ಪುರಸ್ಕೃತ ಮತ್ತು ಖ್ಯಾತ ಸಾಹಿತಿ, ನಟ ಗಿರೀಶ್ ಕಾರ್ನಾಡ್ ಘೋಷಿಸಿಕೊಡಿದ್ದಾರೆ.
ಸಾಹಿತಿ, ವಿಚಾರವಾದಿ ಮತ್ತು ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಪುಣ್ಯತಿಥಿ ನಿಮಿತ್ತ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ಗೌರಿ ದಿನ ನಿಮಿತ್ತದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಿರೀಶ್ ಕಾರ್ನಾಡ್ ಅವರು, ತಮ್ಮ ಕುತ್ತಿಗೆಗೆ "ನಾನೂ ಕೂಡಾ ಅರ್ಬನ್ ನಕ್ಸಲ್" ಎಂಬ ಬೋರ್ಡ್ ಹಾಕಿಕೊಂಡು ಕುಳಿತಿದ್ದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಪೊಲೀಸರು ವಿಚಾರವಾದಿಗಳು ಮತ್ತು ಸಾಹಿತಿಗಳನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಕಾರ್ನಾಡ್ ಅವರು ಈ ರೀತಿಯ ವಿನೂತನ ರೀತಿ ಪ್ರತಿಭಟನೆ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಾತನಾಡಿದ ಅವರು, 'ಪುಣೆ ಪೊಲೀಸರು ಐದು ಮಂದಿ ಎಡಪಂಥೀಯ ಹೋರಾಟಗಾರರನ್ನು ಅರ್ಬನ್ ನಕ್ಸಲ್ ಎಂದು ಹೆಸರಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಇದಕ್ಕೆ ದೇಶದಾದ್ಯಂತ ಪ್ರಗತಿಪರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ಪ್ರಾಯೋಜಿತ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.