ಗೌರಿ ದಿನಾಚರಣೆ ವೇಳೆ ನ್ಯಾಯಪಥ ಪತ್ರಿಕೆ ಲೋಕಾರ್ಪಣೆ
ಬೆಂಗಳೂರು: ಕೋಮುವಾದಿಗಳ ಬೆದರಿಕೆಗೆ ಮತ್ತು ಅವರ ಗನ್ನಿಗೆ ನಾವು ಎಂದೂ ಬಗ್ಗುವುದಿಲ್ಲ ಎಂದು ವಿಚಾರವಾದಿಗಳು ಮತ್ತು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಚಾರವಾದಿಗಳು ಕೇಂದ್ರ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಒಕ್ಕೋರಲಿನಿಂದ ಹೇಳಿದೆ. ಗೌರಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ದಿ ವೈರ್ ಪತ್ರಿಕೆ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರು, 'ಆದಿವಾಸಿಗಳು ಹಾಗೂ ದಲಿತ ಹಕ್ಕುಗಳ ಹೋರಾಟಗಾರರನ್ನು, ಬುದ್ಧಿಜೀವಿಗಳನ್ನು ಹಾಗೂ ವಕೀಲರನ್ನು ಬಂಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ' ಎಂದು ಆರೋಪಿಸಿದರು.
ಅಂತೆಯೇ 'ಅನ್ಯಾಯದ ವಿರುದ್ದ ಧ್ವನಿ ಎತ್ತಿದವರವನ್ನು ದಮನಿಸುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಮೋದಿ ಬಳಿ ಜಾರಿ ನಿರ್ದೇಶನಾಲಯ, ಸಿಬಿಐನಂಥಹ ಸಂಸ್ಥೆಗಳಿರಬಹುದು. ಅಧಿಕಾರ ಇರಬಹುದು. ಆದರೆ ನಮ್ಮ ಬಳಿ ಲೇಖನಿ ಇದೆ. ಗನ್ನಿಗೆ ಬಗ್ಗದ ಪೆನ್ನು ನಮ್ಮದು. ದಬ್ಬಾಳಿಕೆ ವಿರುದ್ಧದ ಸಮರವನ್ನು ಈ ಲೇಖನಿಯಿಂದಲೇ ಗೆಲ್ಲುತ್ತೇವೆ. ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಗಳು, ಬುದ್ಧಿಜೀವಿಗಳ ಬಂಧನ ಆಡಳಿತ ಪಕ್ಷದ ಹತಾಶೆಯ ಪ್ರತೀಕದಂತೆ ಕಾಣುತ್ತಿದೆ. ಆಡಳಿತ ನಡೆಸುವವರ ಪರವಾಗಿರುವ ಗೂಂಡಾಗಳು ಹೋರಾಟಗಾರರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.
'ಗೌರಿ ಸಂವಿಧಾನ, ಜಾತ್ಯಾತೀತ ತತ್ವ, ಶಾಂತಿಯ ಬಗ್ಗೆ ಅಪಾರ ನಂಬಿಕೆ ಹೊಂದಿದ್ದವರು. ಆದಿವಾಸಿ ಹಾಗೂ ದಲಿತರ ಹಕ್ಕುಗಳ ಬಗ್ಗೆ ಬದ್ಧತೆ ಹೊಂದಿದ್ದರು. ಆಕೆಯ ಹತ್ಯೆಯಿಂದ ನಾವೆಲ್ಲ ಆತಂಕಕ್ಕೊಳಗಾಗುತ್ತೇವೆ ಎಂದು ಅವರು ಭಾವಿಸಿರಬಹುದು. ನಾವೆಲ್ಲ ಒಂದು ಕುಟುಂಬವಾಗಿ ಹೋರಾಡಿ ಆಕೆಯ ಆತ್ಮ ಸಮರ್ಪಣೆಗೆ ನ್ಯಾಯ ಒದಗಿಸುತ್ತೇವೆ ಎಂದು ವರದರಾಜನ್ ಹೇಳಿದರು.
ನ್ಯಾಯಪಥ ಲೋಕಾರ್ಪಣೆ
ಇದೇ ವೇಳೆ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಗೌರಿ ಲಂಕೇಶ್ ಅವರ ಪತ್ರಿಕೆ ನ್ಯಾಯಪಥವನ್ನು ಲೋಕಾರ್ಪಣೆ ಮಾಡಿದರು. ಗೌರಿ ಲಂಕೇಶ್ ಪತ್ರಿಕೆಯ ಹೆಸರನ್ನು ಇದೀಗ ನ್ಯಾಯಪಥ ಎಂದು ಬದಲಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos