ಬೆಂಗಳೂರು: ಪತಿ ಕೈಯಲ್ಲಿ ಸರಗಳ್ಳತನ ಮಾಡಿಸುತ್ತಿದ್ದ ಪತ್ನಿ, ಪ್ರತಿ ದಿನ ಕನಿಷ್ಟ ಮೂರು ಚೈನ್ ಕಳ್ಳತನ ಮಾಡಬೇಕು ಎಂದು ಪತಿಗೆ ಟಾರ್ಗೆಟ್ ನೀಡುತ್ತಿದ್ದ ಕತರ್ನಾಕ್ ಪತ್ನಿ ಮಹಾದೇವಿ(29)ಯನ್ನು ಕೆಂಗೇರಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 100 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಕುಖ್ಯಾತ ಚೈನ್ ಸ್ನ್ಯಾಚರ್ ಅಚ್ಯುತ್ ಕುಮಾರ್ ಪತ್ನಿ ಮಹಾದೇವಿಗಾಗಿ ಕೆಂಗೇರಿ ಪೊಲೀಸರು ಕಳೆದ ಮೂರು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದರು.
ಮೂರು ತಿಂಗಳ ಹಿಂದೆ ಅಚ್ಯುತ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು. ಪತಿಯ ಬಂಧನದ ಬಳಿಕ ಮಹಾದೇವಿ ತಲೆಮರೆಸಿಕೊಂಡಿದ್ದಳು. ಸೋಮವಾರ ಖಚಿತ ಮಾಹಿತಿ ಪಡೆದ ಕೆಂಗೇರಿ ಪೊಲೀಸರು ಮಹಾದೇವಿಯನ್ನು ಬಂಧಿಸಿದ್ದಾರೆ.
ಆರೋಪಿ ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ ಮಾಡುವಂತೆ ಪತಿಯನ್ನು ಒತ್ತಾಯಿಸಿದ್ದಳು ಎಂದು ಅಚ್ಯುತ್ ಕುಮಾರ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಮೊದಲ ಪತಿಗೆ ಕೈಕೊಟ್ಟು ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳು. ಅಷ್ಟೇ ಅಲ್ಲದೇ ಮಹಾದೇವಿ ದಿನಕ್ಕೆ ಕನಿಷ್ಟ ಮೂರ್ನಾಲ್ಕು ಸರಗಳ್ಳತನ ಮಾಡಲೇಬೇಕೆಂದು ಗಂಡನಿಗೆ ತಾಕೀತು ಮಾಡಿದ್ದಳು. ಹೆಂಡತಿ ಮಾತಿನಂತೆಯೇ ಅಚ್ಯುತ್ ಕುಮಾರ್ ಕಳ್ಳತನ ಮಾಡುತ್ತಿದ್ದನ್ನು ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಒಂದೇ ವರ್ಷದಲ್ಲಿ ಅಚ್ಯುತ್ ಕುಮಾರ್ ಸುಮಾರು ಒಂದು ಕೋಟಿ ರು. ಬೆಲೆಬಾಳುವ ಸರಗಳ್ಳತನ ಮಾಡಿದ್ದನು. ಆದರೆ ಮೂರು ತಿಂಗಳ ಹಿಂದೆ ನೈಸ್ ರೋಡ್ ಬಳಿ ಆರೋಪಿ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos