ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಆಸ್ಪತ್ರೆ ಬಿಲ್ ಕಟ್ಟಲಾಗದೇ ಪುತ್ರ ನೇಣಿಗೆ ಕೊರಳೊಡ್ಡಿದ್ದಾನೆ, ಇತ್ತ ಮಗನ ಸಾವಿನ ಸುದ್ದಿ ತಿಳಿದು ತಂದೆಯೂ ಕೊನೆಯುಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ತಂದೆಯ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದು ಆಸ್ಪತ್ರೆಯಲ್ಲಿದ್ದ ಅಪ್ಪ ಕೂಡ ಮೃತಪಟ್ಟಿದ್ದಾರೆ.
ಬೂಕನಕೆರೆ ಗ್ರಾಮದ ಮಂಜು(25) ಮತ್ತು ತಂದೆ ಈರಣ್ಣ ಶೆಟ್ಟಿ(50) ಮೃತರು.
ಹಲವು ದಿನಗಳಿಂದ ತಂದೆ ಈರಣ್ಣ ಶೆಟ್ಟಿ ಮೈಸೂರಿನ ಕುವೆಂಪು ನಗರದ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯತ್ತಿದ್ದರು. ಇದರಿಂದಾಗಿ ಚಿಕಿತ್ಸೆ ವೆಚ್ಚವಾಗಿ 2 ಲಕ್ಷ ರೂ. ಬಿಲ್ ಆಗಿತ್ತು. ಮನೆಯಲ್ಲಿದ್ದ ಚಿನ್ನಾಭರಣ ಮಾರಿ ಮಂಜು ಬಿಲ್ ಪಾವತಿ ಮಾಡಿದ್ದ, ಚಿಕಿತ್ಸೆ ಮುಂದುವರಿದ ಹಿನ್ನೆಲೆಯಲ್ಲಿ ಮತ್ತೆ ಬಿಲ್ ಹೆಚ್ಚಿತ್ತು.
ಬುಧವಾರ ಮನೆಗೆ ಬಂದ ಮಂಜು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈರಣ್ಣ ಶೆಟ್ಟಿ ಮಗನ ಸಾವಿನ ಸುದ್ದಿ ಕೇಳುತ್ತಲೇ ಕೊನೆಯುಸಿರೆಳೆದಿದ್ದಾರೆ. ಇದನ್ನು ತಿಳಿದ ಬೂಕನಕೆರೆ ಗ್ರಾಮಸ್ಥರು ಉಳಿದ ಬಿಲ್ ಪಾವತಿ ಮಾಡಿ ಈರಣ್ಣ ಶವವನ್ನು ಗ್ರಾಮಕ್ಕೆ ತಂದಿದ್ದಾರೆ, ತಂದೆ ಮಗನ ಸಾವಿಗೆ ಗ್ರಾಮಸ್ಥರು ಕಣ್ಣೀರು ಹಾಕಿ ವಿಧಿಯನ್ನು ಶಪಿಸಿದ್ದಾರೆ.