ಶಿವಮೊಗ್ಗ: ಕಳೆದ ವಾರ ಇಲ್ಲಿನ ಭದ್ರಾ ನದಿ ದಂಡೆಯಲ್ಲಿ ಚಿತ್ರತಂಡ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಬಳಸಲಾಗಿದ್ದ ಡ್ರೋನ್ ನಿಂದ ಕಡಲ ಹಕ್ಕಿಯೊಂದು ಸಿಕ್ಕಿ ಸತ್ತು ಹೋಗಿತ್ತು. ಇದು ಇಲ್ಲಿನ ವನ್ಯಜೀವಿ ಪ್ರಾಣಿ-ಪಕ್ಷಿ ಸಂಕುಲದ ಜೀವ ರಕ್ಷಣೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಸ್ಥಳೀಯ ಪರಿಸರವಾದಿಗಳನ್ನು ಆತಂಕಕ್ಕೀಡುಮಾಡಿದೆ.
ಈ ಘಟನೆ ನಡೆಯುವಾಗ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಇದ್ದರು. ಹಕ್ಕಿ ಸತ್ತಿದ್ದು ಮಾತ್ರವಲ್ಲದೆ ಇಡೀ ಡ್ರೋನ್ ಕ್ಯಾಮರಾ ನಾಶವಾಗಿತ್ತು. ಆದರೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಕೂಡ ನಡೆಯಿತು.
ಕಳೆದ ವಾರ ಭದ್ರಾ ನದಿ ತೀರದ ಲಕ್ಕವಳ್ಳಿ ದ್ವೀಪದಲ್ಲಿ ಹಲವು ಜೀವ ಪ್ರಬೇಧಗಳ ವೈವಿಧ್ಯತೆಯನ್ನು ಸೆರೆಹಿಡಿಯಲು ಚಿತ್ರತಂಡ ಸಜ್ಜಾಗಿತ್ತು. ಅರಣ್ಯ ಇಲಾಖೆ ಮತ್ತು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಗಳು ಬೋಟ್ ಸಫಾರಿ ನಡೆಸುತ್ತದೆ. ಚಿತ್ರತಂಡವನ್ನು ಕರೆದುಕೊಂಡು ಬೋಟ್ ಸಫಾರಿ ನಡೆಸುತ್ತಿದ್ದಾಗ ಅರಣ್ಯ ಅಧಿಕಾರಿಗಳು, ಉಪಕರಣಗಳು ಮತ್ತು ಡ್ರೋನ್ ಕ್ಯಾಮರಾವನ್ನು ಬಳಸಲಾಗಿತ್ತು.
ವನ್ಯಜೀವಿ ಕರ್ನಾಟಕ ಅಥವಾ ಬೇರೆ ಯಾವುದಾದರೂ ಸಿನಿಮಾಕ್ಕಾಗಿ ಇಲ್ಲಿ ಶೂಟಿಂಗ್ ಮಾಡಲಾಗಿತ್ತಾ ಎಂಬ ಬಗ್ಗೆ ಮಾಹಿತಿಯಿಲ್ಲ. ಲಕ್ಕವಳ್ಳಿ ದ್ವೀಪದ ಸುತ್ತಮುತ್ತ ಸಾವಿರಾರು ಪ್ರಾಣಿ ಪಕ್ಷಿ ಸಂಕುಲಗಳು ಬೀಡುಬಿಟ್ಟಿವೆ. ಇಲ್ಲಿ ಶೂಟಿಂಗ್ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡಿತ್ತೇ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ಚಿತ್ರತಂಡ ಭದ್ರಾ ನದಿ ದಂಡೆಯ ಹುಲ್ಲಿನ ಹಾಸಿನ ಮೇಲೆ ಶೂಟಿಂಗ್ ಮಾಡಿದೆ. ಆದರೆ ಅಲ್ಲಿ ಅನುಮತಿ ನೀಡಿದ್ದಾರೆಯೇ ಇಲ್ಲವೇ ಎಂದು ನನಗೆ ಸಂಶಯವಿದೆ ಎನ್ನುತ್ತಾರೆ ಅರಣ್ಯ ಸಂರಕ್ಷಣೆ ಹೋರಾಟಗಾರರೊಬ್ಬರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos