ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಖಾಸಗಿ ಸಹಾಯಕನಿಂದ ಅಪಹರಣ ಪ್ರಕರಣವೊಂದರಲ್ಲಿ ತಪ್ಪಿಸಿಕೊಂಡಿದ್ದ ಬಿಜೆಪಿಯ ಮಾಜಿ ಮಾಧ್ಯಮ ಸಂಯೋಜಕ ಎಸ್ ಎಸ್ ವಿನಯ್ ತಮಗೆ ರಕ್ಷಣೆ ನೀಡುವಂತೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ನಿನ್ನೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ತಮ್ಮ ಪರ ವಕೀಲರ ಜೊತೆ ತೆರಳಿದ್ದ ವಿನಯ್ ಅರ್ಜಿಯನ್ನು ಸಲ್ಲಿಸಿದರು. ಕೆಲವು ಶಂಕಾಸ್ಪದ ವ್ಯಕ್ತಿಗಳು ತಮ್ಮ ಮನೆಯ ಸುತ್ತ ಸುಳಿಯುತ್ತಿದ್ದು ಇದರಿಂದ ತಮ್ಮ ಕುಟುಂಬಕ್ಕೆ ಜೀವ ಭಯ ಉಂಟಾಗಿದೆ. ಅಪರಿಚಿತ ವ್ಯಕ್ತಿಗಳು ತಮ್ಮನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ತಮ್ಮನ್ನು ಅಪಹರಿಸುವ ಯತ್ನ ನಡೆದಿದ್ದು ನನ್ನ ಜೀವಕ್ಕೆ ಭಾರೀ ಅಪಾಯವಿದೆ ಎನಿಸುತ್ತಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಮ್ಮಲ್ಲಿ ಪೆನ್ ಡ್ರೈವ್, ಸಿಡಿ ಮತ್ತು ಡೈರಿ ಇದ್ದು ಅದರಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ಮಾಡಲಾಗಿದೆ ಎಂದು ಕೂಡ ವಿನಯ್ ಹೇಳಿದ್ದು ಪೊಲೀಸರು ಪೆನ್ ಡ್ರೈವ್ ಮತ್ತು ಇತರ ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸುವಂತೆ ಹೇಳಿದ್ದಾರೆ. ಸದ್ಯದಲ್ಲಿಯೇ ಕೋರ್ಟ್ ಗೆ ನೀಡುತ್ತೇನೆ ಎಂದು ವಿನಯ್ ತಿಳಿಸಿದ್ದಾರೆ.
2017ರ ಮೇ ತಿಂಗಳಲ್ಲಿ ಅಪರಿಚಿತ ದುಷ್ಕರ್ಮಿಗಳು ವಿನಯ್ ನನ್ನು ಅಪಹರಿಸಲು ಯತ್ನಿಸಿದ್ದು ಆಗ ಅವರು ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪನವರ ಖಾಸಗಿ ಸಹಾಯಕನಾಗಿದ್ದರು. ಆಗ ವಿನಯ್ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಯಡಿಯೂರಪ್ಪ ಅವರ ಪಿಎ ಮತ್ತು ಸಂಬಂಧಿಕ ಎನ್ ಆರ್ ಸಂತೋಷ್ ವಿನಯ್ ನನ್ನು ಅಪಹರಿಸಲು ಯತ್ನಿಸಿದ್ದರು ಎನ್ನಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos